ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ಕೆಲಸಗಾರರಿಗೆ ಅಕ್ರಮವಾಗಿ ವೀಸಾ ಒದಗಿಸುವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ನಾಯಕ ಕಾರ್ತಿ ಪಿ ಚಿದಂಬರಂ ಅವರ ನಿಕಟವರ್ತಿ ಎಸ್ ಭಾಸ್ಕರ್ ರಾಮನ್ ಅವರನ್ನು ವಿಚಾರಣೆ ನಡೆಸಿದ ಬಳಿಕ ಕೇಂದ್ರ ತನಿಖಾ ದಳ ಮಂಗಳವಾರ ತಡರಾತ್ರಿ ಬಂಧಿಸಿದೆ.
ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ಕಾರ್ತಿ ಚಿದಂಬರಂ ಅವರ ಸಹವರ್ತಿ ಎಸ್. ಭಾಸ್ಕರ್ ರಾಮನ್ ವಿರುದ್ಧವೂ ಲಂಚದ ಆರೋಪ ಕೇಳಿಬಂದಿತ್ತು. ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರು 50 ಲಕ್ಷ ರೂಪಾಯಿ ಲಂಚದ ಬದಲಾಗಿ ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ ಯೋಜನೆಗಾಗಿ ಚೀನಾದ ಉದ್ಯೋಗಿಗಳಿಗೆ ವೀಸಾಗಳನ್ನು ಒದಗಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಕಾರ್ತಿ ಚಿದಂಬರಂ ಅವರ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಿದೆ.
ತಮಿಳುನಾಡಿನಲ್ಲಿ ಮೂರು, ಮುಂಬೈನಲ್ಲಿ ಮೂರು, ಪಂಜಾಬ್ನಲ್ಲಿ ಒಂದು, ಕರ್ನಾಟಕದ ಒಂದು ಮತ್ತು ಒಡಿಶಾದಲ್ಲಿ ಒಂದು ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.