ಹೊಸ ದಿಗಂತ ಆನ್ಲೈನ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಚೆರ್ವತ್ತೂರಿನ ಅಂಗಡಿಯೊಂದರಲ್ಲಿ ಶವರ್ಮ (ಮಾಂಸ ಮಿಶ್ರಿತ ಖಾದ್ಯ) ಸೇವಿಸಿ ಅಸ್ವಸ್ಥಗೊಂಡಿರುವವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ನಿಗಾ ವಿಭಾಗಕ್ಕೆ ದಾಖಲಿಸಲಾಗಿದೆ. ಈ ನಡುವೆ ಶವರ್ಮ ಸೇವಿಸಿ ಅಸ್ವಸ್ಥಗೊಂಡಿರುವವರ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಸೂಪರಿಂಟೆಂಡೆಂಟ್ ಒಳಗೊಂಡಂತೆ ಐದು ಮಂದಿ ತಜ್ಞ ವೈದ್ಯರ ಪ್ರತ್ಯೇಕ ಮೆಡಿಕಲ್ ಬೋರ್ಡ್ ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅನಸ್, ನೇಪಾಳದ ಸಂದೇಶ್ ರಾಯ್ ಎಂಬಿಬ್ಬರನ್ನು ಬಂಧಿಸಲಾಗಿದ್ದು, ಕೂಲ್ಬಾರ್ ಮಾಲಿಕ, ಕಾಲಿಕ್ಕಡವು ಪಿಲಾವಳಪ್ಪು ನಿವಾಸಿ ಕುಞಹಮ್ಮದ್ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ ಹೇಳಿದ್ದಾರೆ.