ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸಲಾಗಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಆಹ್ವಾನ ನೀಡಲಾಗಿತ್ತು ಎಂದು ಬಿಜೆಪಿ ಹೇಳಿದ್ದು, ಈ ಮಾತನ್ನು ಜೆಡಿಎಸ್ ವಿರೋಧಿಸಿದೆ.
ಬಿಜೆಪಿ ಸರ್ಕಾರ ಯಾವುದೇ ಆಹ್ವಾನ ನೀಡಿಲ್ಲ, ಕಥೆ ಬೇರೆಯೇ ಇದೆ ಎಂದು ಜೆಡಿಎಸ್ ಹೇಳಿದೆ. ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ನಂತರ ಮಹತ್ತರ ಕೊಡುಗೆ ನೀಡಿದ, ಕನ್ನಡ ನೆಲದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗ ಎಚ್.ಡಿ. ದೇವೇಗೌಡ ಅವರನ್ನು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಿಜೆಪಿ ಸರ್ಕಾರ ಆಹ್ವಾನ ನೀಡಿಲ್ಲ. ಇದು ಕನ್ನಡಿಗರಿಗೆ ಮಾಡಿರುವ ಅಪಮಾನ ಎಂದು ಜೆಡಿಎಸ್ ಹೇಳಿತ್ತು.
ಇದಕ್ಕೆ ಬಿಜೆಪಿ ಸ್ಪಷ್ಟನೆ ನೀಡಿದ್ದು, ಆಹ್ವಾನ ನೀಡಿ ಆಗಿದೆ. ಇದರ ಜೊತೆಗೆ ಖುದ್ದು ಸಿಎಂ ಬೊಮ್ಮಾಯಿ ಅವರೇ ದೂರವಾಣಿ ಕರೆ ಮೂಲಕ ಆಹ್ವಾನ ಮಾಡಿದ್ದಾರೆ. ಇದು ಸುಳ್ಳು ಆರೋಪ ಎಂದಿದ್ದರು.
ಇದೀಗ ಮತ್ತೆ ಜೆಡಿಎಸ್ ಟಾಂಗ್ ನೀಡಿದ್ದು, ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಬಿಜೆಪಿ ಕಲೆ. ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಯಾವುದೇ ಹೆಸರಿಲ್ಲ. ಆದರೆ ಸಿಎಂ ಆಹ್ವಾನ ನೀಡಿದ್ದಾರೆ ಎಂದು ಹೇಳಿ ಜನರ ದಿಕ್ಕುತಪ್ಪಿಸುತ್ತಿದ್ದಾರೆ. ಅಸಲಿ ಕಥೆ ಮುಚ್ಚಿಟ್ಟಿದ್ದಾರೆ ಎಂದಿದ್ದಾರೆ.