ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ವಿಧಾನಸಭೆಯ ಚುನಾವಣೆಗೆ ಆರು ತಿಂಗಳು ಬಾಕಿ ಇರುವ ಬೆನ್ನಲ್ಲೇ ರಾಜಧಾನಿ ಧರ್ಮಶಾಲಾದ ಶಾಸಕಾಂಗ ಸಭೆಯ ಹೊರಗೆ ಖಾಲಿಸ್ಥಾನ್ ಬಾವುಟ ತಲೆ ಎತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಭಾನುವಾರದಂದು ತಪೋವನದಲ್ಲಿರುವ ವಿಧಾನ ಸಭಾ ಸಂಕೀರ್ಣದ ಪ್ರವೇಶ ದ್ವಾರ ಮತ್ತು ಪಕ್ಕದ ಗೋಡೆಯ ಮೇಲೆ ಧ್ವಜಗಳನ್ನು ನೇತುಹಾಕಲಾಗಿದೆ ಮತ್ತು ಖಾಲಿಸ್ತಾನ್ ಪರ ಘೋಷಣೆಯನ್ನು ಚಿತ್ರಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಹಿಮಾಚಲ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. “ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಎಸ್ಐಟಿಗೆ ಸೂಚಿಸಲಾಗಿದೆ. ಅಂತರ-ರಾಜ್ಯ ಮತ್ತು ಅಂತರಾಷ್ಟ್ರೀಯ ಸಂಪರ್ಕಗಳನ್ನು ಪತ್ತೆಹಚ್ಚಲು ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳನ್ನು ಸಂಪರ್ಕಿಸಲು ಎಸ್ಐಟಿಗೆ ಸೂಚಿಸಲಾಗಿದೆ” ಎಂದು ರಾಜ್ಯ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೋಲೀಸರು ಭಾನುವಾರ ನಿಷೇಧಿತ ಖಲಿಸ್ತಾನ್ ಪರ ಸಂಘಟನೆಯ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನನ್ನು ಬಂಧಿಸಿದ್ದು ಆತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಸೆಕ್ಷನ್ 13 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.