ಹೊಸದಿಗಂತ ವರದಿ ಮೈಸೂರು:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹಿರಿತನ, ಹೊಂದಿರುವ ಹುದ್ದೆಗೆ ತಕ್ಕಂತೆ ಘನತೆಯಿಂದ ಮಾತನಾಡಬೇಕೆ ವಿನಹ ಸಿದ್ದರಾಮಯ್ಯನವರ ತರಹ ಬೇಜವಾಬ್ದಾರಿ ಹಾಗೂ ಉಡಾಫೆಯಿಂದ ಮಾತನಾಡಬಾರದು ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಶುಕ್ರವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ರಾಜಕೀಯ ಮುತ್ಸದ್ದಿಯಾಗಿದ್ದಾರೆ. ದ್ವೇಷದಿಂದ ಸಣ್ಣತನಕ್ಕೆ ಇಳಿದು ಮಾತನಾಡಬಾರದು. ಮುತ್ಸದ್ದಿತನಕ್ಕೆ , ಮತ್ತು ಅವರು ಹೊಂದಿರುವ ಹುದ್ದೆಗೆ ಶೋಭೆ ತರುವಂತದ್ದಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ದೊಡ್ಡ ವ್ಯಕ್ತಿ ಆದರೆ ಬಹಳ ಸಾರಿ ನಾಲಿಗೆ ಜಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತಾರೆ. ಈ ಹಿಂದೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಬಿಜೆಪಿಯ ಒಂದು ನಾಯಿ ಕೂಡ ಸಾಯಲಿಲ್ಲ ಎಂದು ಹೇಳಿದರು. ಆದರೆ ಈಗ ಮೋದಿಯವರನ್ನು ವಿಷ ಸರ್ಪ ಎನ್ನುವ ಮೂಲಕ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದಾರೆ ಎಂದರು.
ಸಿದ್ದರಾಮಯ್ಯನವರ ಚಾಳಿ ನಿಮಗೆ ಅಂಟಿರಬಹುದು. ನೀವು ಸಿದ್ದರಾಮಯ್ಯನವರ ರೀತಿ ಆಗಬೇಡಿ, ಅವರ ರೀತಿ ಸಣ್ಣತನದ ಹೇಳಿಕೆಗಳನ್ನು ನೀಡಬೇಡಿ, ದ್ವೇಷದ ರಾಜಕೀಯ, ನುಡಿಗಳನ್ನು ಬಿಡಿ ಎಂದು ತಿಳುವಳಿಕೆ ಹೇಳಿದರು. ಮಾಜಿ ಮುಖ್ಯಮಂತ್ರಿಯಾದ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ನವರಿಗೆ ಈಗಲೇ ಸೋಲುವ ಭೀತಿ ಆವರಿಸಿಕೊಂಡಿದೆ.ಹಾಗಾಗಿ ಹತಾಶೆಯಿಂದ ತಮ್ಮ ಸಮಾಜದವರ ಕೆಲವು ಪುಂಡರನ್ನು ಬಿಜೆಪಿಯವರ ವಿರುದ್ಧ ಎತ್ತಿ ಕಟ್ಟಿ, ಗಲಾಟೆ ಮಾಡಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾದ ಸಚಿವ ವಿ.ಸೋಮಣ್ಣರ ಪ್ರಚಾರ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡಿ, ತಡೆಯುವ, ಬೆದರಿಕೆ ಹಾಕಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.