ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್, ಅಘಾಡಿ ಸರ್ಕಾರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ‘ಪಾಪ ಹೆಚ್ಚಾದಾಗ ಸಂಹಾರವಾಗುತ್ತದೆ, ಶಿವಸೇನೆಯೇ ಹನುಮಾನ್ ಚಾಲೀಸಾ ನಿಷೇಧಿಸಿತ್ತು. ಇದೀಗ ಶಿವ ಕೂಡಾ ಅವರನ್ನು ಕಾಪಾಡಲಿಲ್ಲ. ಹರಹರ ಮಹದೇವ್. ಅಧಿಕಾರದ ಅಹಂಕಾರದಲ್ಲಿ ಮೆರೆದರೆ ಅಂಥವರ ಪ್ರತಿಷ್ಠೆ ನುಚ್ಚುನೂರಾಗುತ್ತದೆ ಎಂದು ನಾನು 2020ರಲ್ಲೇ ಹೇಳಿದ್ದೆ. ಇದೀಗ ಅದು ನಿಜವಾಗಿದೆ. ಪ್ರಜಾಪ್ರಭುತ್ವ ಎಂಬುದು ಒಂದು ವಿಶ್ವಾಸ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2020ರಲ್ಲಿ ಕಂಗನಾ ರಣಾವತ್ ಅವರ ನಿವಾಸವನ್ನು ಉದ್ಧವ್ ಠಾಕ್ರೆ ಸರ್ಕಾರ ತೆರವುಗೊಳಿಸಿತ್ತು. ಅಕ್ರಮ ಹಾಗೂ ಕಾನೂನುಬಾಹಿರವಾಗಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಆ ಸಂದರ್ಭದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದ ಕಂಗನಾ, ನಿಮ್ಮ ಗರ್ವ ಮುರಿದುಹೋಗಲಿದೆ ಎಂದು ಕೋಪಗೊಂಡಿದ್ದರು.