ದಿಗಂತ ವರದಿ ಮೈಸೂರು:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಕಾನೂನುನ್ನು ಕೂಡಲೇ ರದ್ದುಪಡಿಸುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಹಾಗೂ ಸಂಯುಕ್ತ ಕಿಸಾನ್ ಮೋರ್ಚ ಐಕ್ಯ ಸಮಿತಿ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರ್ಕಾರ ಇತ್ತೀಚೆಗೆ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಈಗಿದ್ದ ಸುಮಾರು 29ಕೇಂದ್ರದ ಕಾಯ್ದೆಗಳನ್ನು 4 ಕಾಯ್ದೆಗಳಾಗಿ ಮಾರ್ಪಾಡು ಮಾಡಿ, ಕೋಡ್ ಗಳಾಗಿ ಮಾಡಿದ್ದಾರೆ. ಇದರಿಂದ 18ಸಾವಿರಕ್ಕೂ ಹೆಚ್ಚಿನ ಸಂಬಳ ತೆಗೆದುಕೊಳ್ಳುವ ಕಾರ್ಮಿಕರನ್ನು ಅದರ ವ್ಯಾಪ್ತಿಯಿಂದ ಹೊರಬರುತ್ತಾರೆ. ಖಾಯಂ ಕೆಲಸಗಾರರ ಬದಲಿಗೆ ನಿಗದಿತ ಅವಧಿ ನೇಮಕಾತಿ ಗುತ್ತಿಗೆ ಕಾರ್ಮಿಕರು ಹೆಚ್ಚಾಗಿ ಅಭದ್ರತೆಯನ್ನು ಸೃಷ್ಟಿಸಲಿದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.
ಉದ್ಯೋಗ ಸುರಕ್ಷೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಯ ಸಂಹಿತೆಯ ಪ್ರಕಾರ ಕಾರ್ಮಿಕರ ಸಂಖ್ಯೆಯನ್ನು ವಿದ್ಯುತ್ ಶಕ್ತಿ ರಹಿತ 10ರಿಂದ 20 ಕ್ಕೆ ಮತ್ತು ವಿದ್ಯುತ್ ಸಹಿತ 20ರಿಂದ 40ಕ್ಕೆ ದ್ವಿಗುಣಗೊಳಿಸುವುದರಿಂದ ಸರ್ಕಾರದಿಂದ ಬೇಕಾಗಿರುವ ಪರವಾನಗಿ ಮಿತಿ ಹೆಚ್ಚಾಗಿ, ಸಣ್ಣ ಮತ್ತು ಮಧ್ಯಮ ಗಾತ್ರದ ಮಾಲೀಕರಿಗೆ ಕಾರ್ಮಿಕರ ಶೋಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಅದೇ ರೀತಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಬೇಕಾಗಿರುವ ಪರವಾನಗಿ ಮಿತಿಯನ್ನು 20ರಿಂದ 50ಕ್ಕೆ ಹೆಚ್ಚಿಸಿ ಶೋಷಣೆಗೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಮೂರು ರೈತ ಕಾಯ್ದೆಗಳನ್ನು ಹಿಂಪಡೆಯಬೇಕು. ಕರಾಳ ಕೃಷಿ ಕಾನೂನು ಹಾಗೂ ವಿದ್ಯುತ್ಛಕ್ತಿ ಮಸೂದೆ 2020 ಹಿಂಪಡೆಯಲಿ, ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ, ದೇಶಾದ್ಯಂತ ಬೆಳೆಗಳಿಗೆ ಕನಿಷ್ಟಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಿ, ಖಾಸಗೀಕರಣ ಮತ್ತು ಕಾರ್ಪೋರೇಟೀಕರಣ ನಿಲ್ಲಿಸಿ, ಪೆಟ್ರೋಲ್, ಡೀಸೆಲ್ ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸಲು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ, ಸಿಐಟಿಯು, ಐಎನ್ ಟಿಯುಸಿ, ಎಐಯುಟಿಯುಸಿ, ಸಂಯುಕ್ತ ರೈತ ಕಿಸಾನ್ ಮೋರ್ಚಾ ಮುಖಂಡರು ಪಾಲ್ಗೊಂಡಿದ್ದರು