ಹೊಸದಿಗಂತ ವರದಿ, ಕೊಡಗು:
ಮಹಾತ್ಮ ಗಾಂಧಿ ಅವರು 1934ರಲ್ಲಿ ಭೇಟಿ ನೀಡಿದ್ದ, ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡುಕುಟ್ಟಿ ಮಂಜುನಾಥಯ್ಯ ಅವರ ಬಂಗಲೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಭೇಟಿ ನೀಡಿದರು.
ಸುಂಟಿಕೊಪ್ಪ ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟ್ ಸಂಸ್ಥೆಯು ಗಾಂಧಿ ವನ ಸ್ಥಾಪನೆಗೆ ಅನುಮತಿ ಮತ್ತು ನೆರವು ನೀಡುವಂತೆ ಎರಡು ವಾರಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.
ಈ ಹಿನ್ನೆಲೆ ಸ್ಥಳ ಪರಿಶೀಲನೆಗಾಗಿ ಬಂದಿದ್ದ ಜಿಲ್ಲಾಧಿಕಾರಿಗಳು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗುಂಡುಕುಟ್ಟಿ ಮಂಜುನಾಥಯ್ಯ ಅವರ ಬಂಗಲೆಗೆ ಭೇಟಿ ನೀಡಿ ತೋಟದ ಮಾಲಕ ಹಾಗೂ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕುಮಾರ್ ಅವರಿಂದ ಗಾಂಧೀಜಿ ಭೇಟಿ ಕುರಿತು ಮಾಹಿತಿ ಪಡೆದು ಜಿಲ್ಲಾಧಿಕಾರಿ ಹರ್ಷ ವ್ಯಕ್ತಪಡಿಸಿದರು.
ಗಾಂಧಿವನ ಯೋಜನೆ ಶ್ಲಾಘನೀಯ ಕಾರ್ಯವಾಗಿದೆ, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಸುಂಟಿಕೊಪ್ಪ ನಾಡಕಚೇರಿಯ ಉಪ ತಹಶೀಲ್ದಾರ್ ಆರ್.ಶಿವಪ್ಪ, ಗ್ರಾಮ ಲೆಕ್ಕಿಗ ನಾಗೇಂದ್ರ, ಟ್ರಸ್ಟ್’ನ ಕಾರ್ಯದರ್ಶಿ ಡೆನ್ನಿಸ್, ಸಂಚಾಲಕ ಮೊಹಿದ್ದೀನ್, ಟ್ರಸ್ಟಿಗಳಾದ ರಮೇಶ್ ಪಿಳ್ಳೈ, ಮುರುಗೇಶ್, ನಾಡ ಕಚೇರಿ ಸಿಬ್ಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.