ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರ​ನ್ನು ವಜಾ‌ ಮಾಡಲಾಗಿದೆ ಎಂದು ನೂತನ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಚೇರಿಯಲ್ಲಿ ರಾಜ್ಯ ಪದಾಧಿಕಾರಿಗಳು ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ರೈತ ಸಂಘ ತ್ಯಾಗ- ಬಲಿದಾನದಿಂದ ಹುಟ್ಟಿದ ಸಂಘಟನೆಯಾಗಿದೆ. ರೈತ ಸಂಘಕ್ಕಾಗಿ ರೈತರು ಹೋರಾಟ ನಡೆಸುವಾಗ ಸರ್ಕಾರದ ಗುಂಡಿಗೆ 153 ಜನ ಹುತಾತ್ಮರಾಗಿದ್ದಾರೆ. ಲಕ್ಷಾಂತರ ಜನ ಪೊಲೀಸರ ಲಾಠಿ- ಬೂಟಿನೇಟು ತಿಂದು ಜೈಲು ವಾಸ ಅನುಭವಿಸಿದ್ದಾರೆ. ಇಂತಹ ಸಂಘಟನೆಯು ಈಗ ತಲೆ ತಗ್ಗಿಸುವಂತಾಗಿದೆ. ರೈತರನ್ನು ಅನುಮಾನದಿಂದ ನೋಡುವಂತಾಗಿದೆ ಎಂದರು.

ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಪೋನ್ ಮಾಡಿದರೆ ಅವರು ಪೋನ್ ತೆಗೆಯಲಿಲ್ಲ. ಇದರಿಂದ ತುರ್ತು ಸಭೆ ಕರೆದು ಕೆಲವು ನಿರ್ಣಯಗಳನ್ನು ಮಾಡಿದ್ದೇವೆ. ರಾಜ್ಯ ರೈತ ಸಂಘದ ರಾಜ್ಯ ಸಮಿತಿಯು 18 ಜಿಲ್ಲೆಯ ಪದಾಧಿಕಾರಿಗಳ ಸಭೆ ನಡೆಸಿದ್ದೇವೆ. ಉಳಿದವರು ನಮಗೆ ಬೆಂಬಲ ಸೂಚಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಮಿತಿಯು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾ ಮಾಡಿದೆ.

ಅವರ ಮೇಲಿನ ಆರೋಪದ ತನಿಖೆಗೆ ಸತ್ಯ ಶೋಧನ ಸಮಿತಿ ರಚನೆ ಮಾಡಲಾಗಿದೆ. ಮೂರು ತಿಂಗಳು ಪ್ರವಾಸ ನಡೆಸಿ, ವರದಿಯನ್ನು ನೀಡಲಿದೆ. ಹೆಚ್.ಆರ್.ಬಸವರಾಜಪ್ಪನಾದ ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!