ಹೊಸದಿಗಂತ ವರದಿ,ಬಳ್ಳಾರಿ:
ಕೋವಿಡ್-19 ಮೊದಲ, ಎರಡನೇ ಅಲೆ ಹೊಡೆತಕ್ಕೆ ಜನರು ತತ್ತರಿಸಿದ್ದು, ಸುಧಾರಿಸಿ ಕೊಳ್ಳುವಷ್ಟರಲ್ಲೇ ಮೂರನೇ ಅಲೆ ಭೀತಿ ಶುರುವಾಗಿದೆ. ಸೊಂಕಿತರಿಗೆ ಆಶಾಕಿರಣ ವಾಗಿರುವ ಇಲ್ಲಿನ ವಿಮ್ಸ್ ಮೆಡಿಕಲ್ ಕಾಲೇಜಿನ 21 ವಿದ್ಯಾರ್ಥಿಗಳಿಗೆ ಕೋವಿಡ್-19 ಸೊಂಕು ತಗುಲಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸೊಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರಿಗೇ ಮಹಾಮಾರಿ ಮೆತ್ತಿಕೊಂಡಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಜೊತೆಗೆ ಮೊದಲ ಸಂಪರ್ಕ, ಸಿಬ್ಬಂದಿಗಳಿಗೂ ಸೊಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಸೊಂಕಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರೆದಿದೆ, ಯಾವುದೇ ಸಮಸ್ಯೆ ಎದುರಾಗಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದು, ಮಾತ್ರೆಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಸೊಂಕಿತ ವಿದ್ಯಾರ್ಥಿಗಳು ಕ್ಯಾಂಪಸ್ ನ ಹಾಸ್ಟೇಲ್ನಲ್ಲಿದ್ದು, ಸುಮಾರು 250 ವಿದ್ಯಾರ್ಥಿಗಳಿದ್ದಾರೆ. ಒಮಿಕ್ರಾನ್, ಕೋವಿಡ್-19 ತೀವ್ರ ಹೆಚ್ಚಾದ ಹಿನ್ನೆಲೆಯಲ್ಲಿ ಹಾಸ್ಟೆಲ್ ನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ವರದಿಯಲ್ಲಿ 21 ಜನರಿಗೆ ಸೊಂಕು ಇರುವುದು ಪತ್ತೆಯಾಗಿದೆ. ಎಲ್ಲ ವಿದ್ಯಾರ್ಥಿಗಳ ದ್ರವದ ಮಾದರಿ ಪಡೆದು ಪರೀಕ್ಷೆ ಮಾಡಲು ಸೂಚಿಸಿರುವೆ ಎಂದು ವಿಮ್ಸ್ ನಿರ್ದೇಶಕ ಡಾ.ಗಂಗಾಧರ್ ಗೌಡ ಅವರು ತಿಳಿಸಿದ್ದಾರೆ.