ಹೊಸದಿಗಂತ ವರದಿ, ಕಾಸರಗೋಡು:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಸರಗೋಡು ನಗರ ಸಂಘಚಾಲಕ್ ಆಗಿದ್ದ ಕೆ.ಟಿ.ಕಾಮತ್ ಎಂದೇ ಪ್ರಸಿದ್ಧರಾಗಿದ್ದ ಕಾಸರಗೋಡು ಕೇಳುಗುಡ್ಡೆ ನಿವಾಸಿ ಕೆ.ತ್ರಿವಿಕ್ರಮ ಕಾಮತ್ (67) ಸೋಮವಾರ ಅಪರಾಹ್ನ 3.30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಅವರು ಅಲ್ಪಕಾಲದಿಂದ ಹೃದಯ ಸಂಬಂಧಿ ಖಾಯಿಲೆಯಿಂದಿದ್ದರು.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮೊದಲಾದ ವಲಯಗಳಲ್ಲಿ ಸಕ್ರಿಯರಾಗಿದ್ದ ಅವರು, ಕಾಸರಗೋಡು ನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಕಾಸರಗೋಡು ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನ, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಾಲಯ ಸೇರಿದಂತೆ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲೂ ಸಾಕಷ್ಟು ಶ್ರಮ ವಹಿಸಿದ್ದರು. ಕಾಸರಗೋಡು ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಬೆಳೆಸುವಲ್ಲೂ ಪ್ರಮುಖ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಸುಮನಾ ಕಾಮತ್, ಪುತ್ರಿಯರಾದ ಅಪರ್ಣಾ, ಅರ್ಚನಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.