ಹೊಸದಿಗಂತ ವರದಿ, ಅಂಕೋಲಾ:
ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಂದಿರುವ ಪದ್ಮಶ್ರೀ ಪುರಸ್ಕೃತ ಜನಪದ ಕಲಾವಿದೆ ಸುಕ್ರಿ ಬೊಮ್ಮ ಗೌಡ ಅವರಿಗೆ ಭಾನುವಾರ ಕುಮಟಾ ಕನ್ನಡ ಸಂಘದ ವತಿಯಿಂದ ಗೌರವಾರ್ಪಣೆ ನೀಡಲಾಯಿತು.
ಆತ್ಮೀಯವಾಗಿ ಸುಕ್ರಜ್ಜಿ ಆರೋಗ್ಯ ವಿಚಾರಣೆ ನಡೆಸಿದ ಸಂಘ, ಅವರನ್ನು ಗೌರವಿಸಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಕ್ರಜ್ಜಿ, ಎಲ್ಲರ ಹಾರೈಕೆಯ ಫಲವಾಗಿ ತಮ್ಮ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಎಲ್ಲರೂ ಆರೋಗ್ಯಪೂರ್ಣರಾಗಿ ಇದ್ದರೆ ನನಗದೇ ಸಂತೋಷ ಎಂದರು. ಸನ್ಮಾನ ನೀಡಿದ ಕುಮಟಾ ಕನ್ನಡ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.
ಕುಮಟಾ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಮಾತನಾಡಿ, ಸುಕ್ರಿ ಗೌಡ ಅವರು ಜನಪದದ ವಿಶ್ವಕೋಶ ಇದ್ದಂತೆ. ಎಲ್ಲರಿಗೂ ಚೈತನ್ಯ. ಇವರು ನೂರ್ಕಾಲ ಆರೋಗ್ಯಪೂರ್ಣರಾಗಿ ಇರಲಿ ಎಂದು ಹಾರೈಸಿದರು.
ಅತಿಥಿಯಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಮಾತನಾಡಿ, ಸುಕ್ರಜ್ಜಿ ನಾಡಿನ ಹಿರಿಮೆಯಾಗಿದ್ದು ಯುವ ಪೀಳಿಗೆಗೆ ಮಾದರಿ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಪತ್ರಕರ್ತ ವಿಠ್ಠಲದಾಸ ಕಾಮತ್ ಮಾತನಾಡಿ ಸುಕ್ರಜ್ಜಿಯವರನ್ನು ಮತ್ತು ಅವರಿಗೆ ಗೌರವಾರ್ಪಣೆ ಮಾಡಿದ ಕುಮಟಾ ಕನ್ನೆ ಸಂಘವನ್ನು ಅಭಿನಂದಿಸಿದರು.
ಕನ್ನಡ ಸಂಘದ ಕಾರ್ಯದರ್ಶಿ ದಯಾನಂದ ದೇಶಭಂಡಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಬಾಬು ನಾಯ್ಕ ವಂದಿಸಿದರು.
ಉಪಾಧ್ಯಕ್ಷರಾದ ಮಂಗಲದಾಸ ನಾಯ್ಕ, ನ್ಯಾಯವಾದಿ ಮಮತಾ ನಾಯ್ಕ, ಸುರೇಶ ವಾರೇಕರ್, ನಾಗಪ್ಪ ಮುಕ್ರಿ,ಮಂಜು ದೀವಿಗಿ, ರಾಘವೇಂದ್ರ ಪಟಗಾರ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ