ಹೊಸದಿಗಂತ ವರದಿ, ಮೈಸೂರು
ದಕ್ಷಿಣಕಾಶಿ ಎಂದು ಪ್ರಸಿದ್ದಿಯಾದ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ದೊಡ್ಡ ಜಾತ್ರೆಯ ಪಂಚ ರಥೋತ್ಸವ ಲಕ್ಷಾಂತರ ಮಂದಿ ಭಕ್ತರ ಸಡಗರ, ಸಂಭ್ರಮದ ನಡುವೆ ವಿಜೃಂಭಣೆಯಿಂದ ನಡೆಯಿತು.
ಇಂದು ಮುಂಜಾನೆ 3.30 ರಿಂದ 4.30 ಗಂಟೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಪಂಚ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶ್ರೀಕಂಠೇಶ್ವರನ ಉತ್ಸವಮೂರ್ತಿಯನ್ನು ಹೊತ್ತು ಸಾಗಿದ 96 ಅಡಿ ಎತ್ತರದ ಬೃಹತ್ ರಥ ದೇವಸ್ಥಾನದ ಸುತ್ತಲಿನ ರಾಜ ಬೀದಿಯಲ್ಲಿ ಭಕ್ತರ ಜಯಘೋಷ ದ ನಡುವೆ ಮೆರವಣಿಗೆಯಲ್ಲಿ ಸಾಗಿತು.
ಸಹಸ್ರಾರು ಭಕ್ತರು ರಥ ಎಳೆದು ಪುನೀತರಾದರು. ಶ್ರೀಕಂಠಶ್ವರನ ಮಹಾ ರಥದ ತರುವಾಯ ಪಾರ್ವತಿ, ಗಣಪತಿ ಸೇರಿದಂತೆ ನಾಲ್ಕು ರಥಗಳು ಸರದಿ ಸಾಲಿನಲ್ಲಿ ಸಾಗಿದವು.
ಸೂರ್ಯೋದಕ್ಕೂ ಮುನ್ನ ನಡೆದ ಪಂಚ ಮಹಾ ರಥೋತ್ಸವ ವಿದ್ಯುತ್ ಬೆಳಕಿನಲ್ಲಿ ಕಂಗೊಳಿಸಿತು.
ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸಾಂಕೇತಿಕ ಮತ್ತು ಸಾಂಪ್ರದಾಯಿಕವಾಗಿ ನಡೆದಿದ್ದ ಪಂಚ ಮಹಾ ರಥೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ನಡೆಸಲಾಯಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ