ಹೊಸದಿಗಂತ ವರದಿ, ಕಲಬುರಗಿ:
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಉತ್ತರಾದಿ ಮಠದಲ್ಲಿ ಶ್ರೀ ಅಕ್ಷೋಭ್ಯತೀರ್ಥರ ಆರಾಧನಾ ಮಹೋತ್ಸವ ನಿಮಿತ್ತ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಮಂಗಳವಾರ ಸಂಭ್ರಮ, ವೈಭವದಿಂದ ನೆರವೇರಿತು.
ಶ್ರೀಪಾದಂಗಳವರ ಸಂಕಲ್ಪದಂತೆ ಆರಾಧನೆ ದಿನ ಒಂದು ಲಕ್ಷ ಪ್ರಣತಿಯಲ್ಲಿ ಐದು ಲಕ್ಷ ದೀಪಗಳು ಪ್ರಜ್ವಲಿಸಿದವು. ಅದಲ್ಲದೆ ಒಂದೇ ಬೃಹತ್ ಪ್ರಣತಿಯಲ್ಲಿ ಒಂದು ಲಕ್ಷ ಬತ್ತಿಯ ಮೂಲಕ ಲಕ್ಷ ದೀಪ ಹಚ್ಚಲಾಯಿತು. ಸಂಜೆ ೬ರಿಂದ ಎರಡು ಗಂಟೆಗಳವರೆ ಈ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಒಟ್ಟು ಆರು ಲಕ್ಷ ದೀಪದ ಬೆಳಕು ಝಗಮಗಿಸಿದವು.
ಮಠದ ಮಹಾದ್ವಾರದಿಂದ ವೃಂದಾವನ ಸ್ಥಳದ ವರೆಗೆ ರಸ್ತೆಯ ನಡು ಬದಿಯಲ್ಲಿ ಪ್ರಣತಿಗಳಲ್ಲಿ ದೀಪ ಬೆಳಗಿದವು. ಮಠದ ಆವರಣದ ತುಂಬಾ ದೀಪಗಳ ಬೆಳಕು ಗೋಚರವಾಯಿತು.
ಇದಕ್ಕೂ ಮುನ್ನ ಬೆಳಗ್ಗೆ ಶ್ರೀ ಅಕ್ಷೋಭ್ಯತೀರ್ಥರ, ಶ್ರೀ ಜಯತೀರ್ಥರ ಹಾಗೂ ಶ್ರೀ ರಘುನಾಥತೀರ್ಥರ ಮೂಲ ವೃಂದಾವನಗಳಿಗೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತಾಭಿಷೇಕ ಹಾಗೂ ಹಸ್ತೋದಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ೬ಕ್ಕೆ ಲಕ್ಷ ದೀಪೋತ್ಸವ ನಂತರ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು.