ಹೊಸದಿಗಂತ ವರದಿ, ಹಾವೇರಿ:
ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ, ಅರಬಗೊಂಡ ಹಾಗೂ ಅಳಲಗೇರಿ ಗ್ರಾಮದಲ್ಲಿನ ಒಂದು ಸಾವಿರಕ್ಕೂ ಅಧಿಕ ಜಮೀನಿನಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಗಾಗಿ ತೆಗೆದುಕೊಂಡ ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡುವುದಾಗಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ಪ್ರತಿಭಟನಾ ನಿರತ ರೈತರಿಗೆ ತಿಳಿಸಿದರು.
ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ತಾಲೂಕಾ ರೈತ ಸಂಘ ಹಮ್ಮಿಕೊಂಡಿದ್ದ ಕೈಗಾರಿಕಾ ಕಾರಿಡಾರ್ಗೆ ಭೂಸ್ವಾಧೀನ ವಿರೋಧಿಸಿ ಬೃಹತ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಕೆಲವೇ ದಿನಗಳ ಹಿಂದೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಆದರೇ ನಿವೆಲ್ಲಾ ರೈತರು ಭೂಸ್ವಾಧೀನಕ್ಕೆ ವಿರೊಧ ವ್ಯಕ್ತಪಡಿಸುವುದುರಿಂದ ಯಾವುದೇ ರೈತರ ಜಮೀನನ್ನು ಭೂಸ್ವಾಧೀನಕ್ಕೆ ಒಳಪಡಿಸುವ ಕ್ರಿಯೆಯನ್ನು ಕೈ ಬಿಡಲಾಗಿದೆ ಎಂದು ಭರವಸೆ ನೀಡಿದರು.
ಶಾಸಕ ವೀರುಪಾಕ್ಷಪ ಬಳ್ಳಾರಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಅವರೊಂದಿಗೆ ಮಾತುಕತೆ ನಡೆಸಿದ್ದು ರೈತರ ಒಂದಿಂಚೂ ಭೂಮಿಯನ್ನು ಭೂಸ್ವಾಧೀನಕ್ಕೆ ಒಳಪಡಿಸದಂತೆ ಮನವಿ ಮಾಡಿದ್ದು, ಭೊಸ್ವಾಧೀನ ಪ್ರಕ್ರಿಯೆ ಕೈಬಿಡಲು ಒಪ್ಪಿಕೊಂಡಿದ್ದಾರೆಂದರು. ಒಂದು ವೇಳೆ ಸರಕಾರ ನಮ್ಮ ಮಾತು ನಡೆಸಿ ಕೋಡದೇ ಹೋದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಿಮ್ಮೊಂದಿಗೆ ಹೋರಾಟ ಮಾಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ, ಚಿತ್ರದುರ್ಗದ ಯಾದವನಂದ ಸ್ವಾಮೀಜಿ, ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ ಹಾಗೂ ಬಸವರಾಜ ಶಿವಣ್ಣನವರ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ರೈತರ ಹೋರಾಟ ಬೆಂಬಲಿಸಿ ಮಾತನಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ವಿಜಯ ಬಳ್ಳಾರಿ, ಕಿರಣಕುಮಾರ ಗಡಿಗೋಳ, ರುದ್ರಗೌಡ ಕಾಡನಗೌಡ್ರ, ಗಂಗಣ್ಣ ಯಲಿ, ನಾಗರಾಜ ಆನ್ವೇರಿ, ಪಿ.ಟಿ.ಲಕ್ಕಣ್ಣನವರ, ವಿ.ವಿ.ಹಿರೇಮಠ, ಪ್ರಕಾಶ್ ಬನ್ನಿಹಟ್ಟಿ, ಮಾತನಾಡಿ ಯಾವುದೇ ಸಂದರ್ಭದಲ್ಲೂ ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಜಿಲ್ಲಾಧಿಕಾರಿ ರಘುನಂದನ ಅವರ ಭರವಸೆಯಂತೆ ಅನಿರ್ದಿಷ್ಟಾವಧಿಯ ಭೂಸ್ವಾಧೀನ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯುವುದಾಗಿ ತಿಳಿಸಿದರು.