ಹೊಸದಿಗಂತ ವರದಿ, ಮೈಸೂರು:
ಸಾರ್ವಜನಿಕರ ದಿನನಿತ್ಯದ ಕೆಲಸದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಮೈಸೂರಿನ ತಾಲ್ಲೂಕು ಕಚೇರಿಗೆ ಸೋಮವಾರ ಶಾಸಕ ಎಲ್ ನಾಗೇಂದ್ರ ಧಿಡೀರ್ ಭೇಟಿ ನೀಡಿ ಅಧಿಕಾರಿಗಳಿಗೆ ನಾಗರಿಕರಿಗೆ ತೊಂದರೆ ಆಗದಂತೆ ಕಾಲಮಿತಿಯಲ್ಲಿ ಕೆಲಸ ಮಾಡಿಕೊಡಲು ನಿರ್ದೇಶನ ನೀಡಿದರು.
ಕಚೇರಿಯ ಪ್ರಮುಖ ವಿಭಾಗಗಳಿಗೆ ಹೋಗಿ ಅರ್ಜಿಯೊಂದಿಗೆ ನಿಂತಿದ್ದ ನಾಗರಿಕರ ಅಹವಾಲು ಸ್ವೀಕರಿಸಿ, ಜನರಿಗೆ ತೊಂದರೆ ಆಗದಂತೆ ಸರ್ಕಾರದ ಯೋಜನೆಯನ್ನು ಅರ್ಹ ಅರ್ಜಿದಾರರಿಗೆ ಶೀಘ್ರವಾಗಿ ತಲುಪುವಂತೆ ಹಾಗೂ ಅಗತ್ಯ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ದೊರೆಯುವಂತೆ ಕ್ರಮವಹಿಸಿ, ಮೂಲಕ ಸರ್ಕಾರದ ಆಡಳಿತ ವೈಖರಿಗೆ ಮೆಚ್ಚುಗೆ ಪಡೆಯುವಂತಹ ಕೆಲಸ ಮಾಡಿ ಎಂದು ಹೆಚ್ಚುವರಿ ತಹಸಿಲ್ಧಾರ್ ರೂಪ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ, ಬಿಜೆಪಿ ಮುಖಂಡರಾದ ರವಿ, ಎಂ ಶಿವಪ್ರಕಾಶ್, ಎಂ.ಮಹೇಶ್, ಹೆಚ್. ಹರೀಶ್ ಕುಮಾರ್,ಪೈ. ಅಭಿ,ರವಿಕುಮಾರ್,ಎ.ನಾರಾಯಣಸ್ವಾಮಿ, ದೇವಪ್ಪನಾಯಕ,ಪ್ರಭಾಕರ್, ಶ್ರೀಧರ, ವೀರನಗೆರೆ ವಿಜಯ್ ಕುಮಾರ್, ಶಿವಕುಮಾರ್ ಮತ್ತಿತರರು ಇದ್ದರು