ಹೊಸದಿಗಂತ ವರದಿ,ಕಲಬುರಗಿ:
ರಾಷ್ಟ್ರಕೂಟರ ನಾಡು, ಸಾಂಸ್ಕೃತಿಕ ನಗರಿ ಸೇಡಂದಲ್ಲಿ ಬರುವ ನವ್ಹೆಂಬರ್ 14ರಂದು ನಡೆಯುವ 69 ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಮಾದರಿಯಾಗಿ ನಡೆಯಲು ನಾವೆಲ್ಲರೂ ಹಗಲಿರುಳು ಶ್ರಮಿಸಬೇಕಾಗಿದೆ ಎಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ( ಡಿಸಿಸಿ) ಬ್ಯಾಂಕ್ – ಕೆಕೆಆರ್ ಟಿಸಿ ಅಧ್ಯಕ್ಷರಾಗಿರುವ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು.
ಅಖಿಲ ಭಾರತ ಸಹಕಾರಿ ಸಪ್ತಾಹ ಅಂಗವಾಗಿ ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ದತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ 50 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ವಿದೆ. ಹೀಗಾಗಿ ಶಿಸ್ತು ಬದ್ದ ಅಂದರೆ ಸಹಕಾರಿ ಶಿಕ್ಷಣ ತಿಳುವಳಿಕೆ, ಉತ್ತಮ ಅತಿಥಿ ಸತ್ಕಾರ ಹಾಗೂ ಸಾಂಸ್ಕೃತಿಕ ವಾಗಿ ನಡೆಸಲು ಉದ್ದೇಶಿಸಲಾಗಿದೆ. ಆದ್ದರಿಂದ ಸಹಕಾರಿ ಕ್ಷೇತ್ರದ ಎಲ್ಲ ಅಧಿಕಾರಿಗಳು, ಸಹಕಾರಿ ಕ್ಷೇತ್ರದ ಸದಸ್ಯರು ಸಪ್ತಾಹ ಯಶಸ್ವಿಗೆ ಸರ್ವ ನಿಟ್ಟಿನಲ್ಲಿ ಕೈ ಜೋಡಿಸಬೇಕೆಂದರು.
ಸಹಕಾರಿ ಸಪ್ತಾಹ ಉದ್ಘಾಟನೆಗೆ ಮುಖ್ಯಮಂತ್ರಿ ಸೇರಿದಂತೆ ಸಚಿವರ ದಂಡು ಆಗಮಿಸಲಿದ್ದು, ಸಪ್ತಾಹ ದಲ್ಲಿ ಸಹಕಾರಿ ಧುರೀಣರನ್ನು ಸನ್ಮಾನಿಸಲಾಗುತ್ತಿದೆ. ಪ್ರಮುಖವಾಗಿ ನಮ್ಮೆಲ್ಲರ ಒತ್ತಾಯ ಹಾಗೂ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್. ಟಿ.ಸೋಮಶೇಖರ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಸೇಡಂದಲ್ಲಿ ಸಹಕಾರ ಸಪ್ತಾಹ ನಡೆಸಲು ಒಪ್ಪಿಗೆ ಹಾಗೂ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ ಸರ್ವ ನಿಟ್ಟಿನಲ್ಲಿ ಯಾವುದಕ್ಕೂ ಕೊರತೆಯಾಗದಂತೆ ಸಿದ್ದತೆ ಮಾಡಿಕೊಳ್ಳಬೇಕೆಂದರು.
ಸಹಕಾರಿ ಇಲಾಖೆಯ ಅಪರ ನಿಬಂಧಕರಾದ ಕೆ.ಎಂ ಆಶಾ ಅವರು ಮಾತನಾಡಿದರು.ಸಭೆಯಲ್ಲಿ ಜಂಟಿ ನಿಬಂಧಕ ಎ.ಜೆ. ಕಾಂತರಾಜ, ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಶರಣಬಸಪ್ಪ ಪಾಟೀಲ್ ಅಷ್ಠಗಿ, ಅಶೋಕ ಸಾವಳೇಶ್ವರ, ಕಲ್ಯಾಣರಾವ್ ಪಾಟೀಲ್ ಮಳಖೇಡ, ಚಂದ್ರಶೇಖರ ತಳ್ಳಳ್ಳಿ, ಸೇರಿದಂತೆ ಮುಂತಾದವರಿದ್ದರು.