ಹೊಸದಿಗಂತ ವರದಿ ಶಿವಮೊಗ್ಗ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಮತ ಬೇಡ ಎಂದು ಘೋಷಣೆ ಮಾಡಲಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿ, ಪಿಎಫ್ಐ ನಿಷೇಧ ಕುರಿತು ಹೇಳಿಕೆ ನೀಡುವಾಗ ಆರ್ಎಸ್ಎಸ್ ಕುರಿತು ಪ್ರಸ್ತಾಪ ಮಾಡಿದ್ದಾರೆ. ಆರ್ಎಸ್ಎಸ್ ಯಾವತ್ತೂ ದೇಶ ವಿರೋಧಿ ಕೃತ್ಯ ಮಾಡಿಲ್ಲ. ಅದೊಂದು ದೇಶಭಕ್ತ ಸಂಘಟನೆ. ಇಂತಹ ಸಂಘಟನೆಯನ್ನೇ ವಿರೋಧ ಮಾಡುವುದಾದರೆ ಹಿಂದೂಗಳ ಮತವೂ ಬೇಡ ಎಂದು ಘೋಷಣೆ ಮಾಡಲಿ ಎಂದರು.
ಪಿಎಫ್ಐಗೆ ಬೆಂಬಲ ಕೊಡುತ್ತಾ ಬಂದಿದ್ದೇ ಕಾಂಗ್ರೆಸ್. ಹಾಗಾಗಿಯೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿತ್ತು. ಅದನ್ನೇ ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ನಳಿನ್ ಅವರಿಗೆ ವಿದೂಷಕ ಎಂದು ಕರೆದಿದ್ದಾರೆ. ಈ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.