ಹೊಸದಿಗಂತ ವರದಿ ತುಮಕೂರು :
ಭೇಟಿ, ಅಭಿನಂದನೆ, ಸನ್ಮಾನದ ರೂಪದಲ್ಲಿ ನನಗೆ ಹಾರ, ತೂರಾಯಿ, ಶಾಲು, ಪುಷ್ಪಗುಚ್ಚ, ಶಲ್ಯಗಳನ್ನು ನೀಡುವ ಅದ್ದೂರಿ ಆಡಂಬರ ಬೇಡ ಎಂದು ಸಚಿವರಾದ ಡಾ.ಜಿ.ಪರಮೇಶ್ವರ್ ಅಭಿಮಾನಿಗಳಲ್ಲಿ. ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿಗಳು ಈ ರೀತಿಯ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಇದೀಗ ಮಾಜಿ ಡಿಸಿಎಂ ಹಾಗೂ ಹಾಲಿ ಸಚಿವರಾದ ಡಾ.ಜಿ.ಪರಮೇಶ್ವರ್ ಕೂಡ ಅದ್ದೂರಿ, ಅಡಂಬರದ ಅಭಿನಂದನೆ ಸ್ವಾಗತ ಮಾಡದಂತೆ ಮನವಿಮಾಡಿದ್ದಾರೆ.
ಇದು ನನ್ನ ಮನೆ-ಕಚೇರಿ ಹಾಗೂ ಸಮಾರಂಭಗಳಿಗೂ ಅನ್ವಯಿಸಲಿದೆ. ಕಾಣಿಕೆ, ಹಾರ ತುರಾಯಿಗಳ ಮೂಲಕವೇ ಪ್ರೀತಿ ಗೌರವ ಸಲ್ಲಸಬೇಕೇಂದೇನಿಲ್ಲ, ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋಣಿಯಾಗಿದ್ದು, ಈಗಾಗಲೇ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯಅವರು ಕೈಗೊಂಡಿರುವ ನಿರ್ಧಾರವನ್ನು ಅಭಿನಂದಿಸುತ್ತಾ ನಾನೂ ಅವರನ್ನು ಅನುಸರಿಸಲು ಬಯಸಿದ್ದೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಹೆಸರಾಗಿರುವ ಡಾಜಿ.ಪರಮೇಶ್ವರ್ ಅವರ ನಡೆಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.