ಹೊಸದಿಗಂತ ವರದಿ ಹುಬ್ಬಳ್ಳಿ:
ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರಿಗೆ ಜೋಡೋ ಯಾತ್ರೆಗೆ ಬಾರಿ ಬೆಂಬಲ ದೊರೆಯುತ್ತಿರುವುದರಿಂದ ಕೊರೋನಾ ನೆಪ ಹೇಳಿ ಬಿಜೆಪಿ ಸರ್ಕಾರ ತಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಹೋದಲ್ಲಿ ಜನರಿಂದ ಬೆಂಬಲ ಹಾಗೂ ಪ್ರಚಾರ ದೊರೆಯುತ್ತಿದೆ. ಕೊರೋನಾ ಬರುತ್ತಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಮೇಕೆದಾಟು ಯಾತ್ರೆ ಸಂದರ್ಭದಲ್ಲಿಯೂ ಸಹ ಈ ಸರ್ಕಾರ ತಡೆಯಲು ಪ್ರಯತ್ನ ಪಟ್ಟಿತ್ತು. ನನ್ನ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೂರನಾಲ್ಕು ಪ್ರಕರಣ ಸಹ ದಾಖಲಿಸಿದ್ದರು. ಅದೇ ರೀತಿ ರಾಹುಲ್ ಗಾಂಧಿ ಮಾಡಬಾರದು ಎಂಬ ಉದ್ದೇಶ ಬಿಜೆಪಿ ಹೊಂದಿದೆ.
ಆದರೆ ಕೊರೋನಾ ಬಗ್ಗೆ ನನಗೆ ವೈಜ್ಞಾನಿಕ ಮಾಹಿತಿ ಇಲ್ಲ. ಅಷ್ಟೇ ಅಲ್ಲದೆ ಚುನಾವಣೆಯನ್ನೂ ಸಹ ಮುಂಚಿತವಾಗಿ ಮಾಡಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಘೋಷಣೆ ಯಾವಾಗ ಮಾಡಿದರು ನಮ್ಮ ಪಕ್ಷ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.