ಹೊಸ ದಿಗಂತ ಡಿಜಿಟಲ್ ಡೆಸ್ಕ್
ವಾರಾಣಸಿಯ ಸುಧೀರ್ ಸಿಂಗ್, ಸಂಕಟ ಮೋಚನ ದೇವಸ್ಥಾನದ ಬಳಿ ವಾಸಿಸುವವರು. ಇತ್ತೀಚೆಗೆ ಅವರು ಪಕ್ಕದ ಮಸೀದಿಗಳಿಂದ ಧ್ವನಿವರ್ಧಕದಲ್ಲಿ ಆಜಾನ್ ಕೂಗು ಮೊಳಗುವ ಹೊತ್ತಿನಲ್ಲೇ ಟೆರೆಸ್ ಏರಿ ತಮ್ಮ ಸಹವರ್ತಿಗಳೊಂದಿಗೆ ಧ್ವನಿವರ್ಧಕದ ಮೂಲಕ ಹನುಮಾನ್ ಚಾಲೀಸಾ ಪಠಣವನ್ನು ಆರಂಭಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ಅವರು ವಿಡಿಯೊ ತುಣುಕುಗಳನ್ನು ಹರಿಬಿಟ್ಟಿದ್ದು ಅದೀಗ ಭಾರಿ ಪ್ರಚಾರ ಪಡೆದಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಧ್ವನಿವರ್ಧಕದಲ್ಲಿ ಬರುವ ಆಜಾನ್ ಕೂಗನ್ನು ಪ್ರಶ್ನಿಸಿ ಇಂಥ ಪ್ರತಿಕ್ರಿಯಾತ್ಮಕ ನಡೆಗಳು ಅದಾಗಲೇ ದಾಖಲಾಗಿವೆ.
ನೀವೇಕೆ ಹೀಗೆ ಮಾಡ್ತಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಸುಧೀರ್ ಸಿಂಗ್ ಹೀಗೆ ಉತ್ತರಿಸಿದ್ದಾರೆ- “ಮೊದಲೆಲ್ಲ ನಾವು ಸಂಸ್ಕೃತ ಸುಪ್ರಭಾತಗಳನ್ನು ಕೇಳಿಸಿಕೊಳ್ಳುತ್ತ ಎದ್ದು ದಿನಚರಿ ಆರಂಭಿಸುತ್ತಿದ್ದೆವು. ಈಗ ಆಜಾನ್ ಕೇಳುತ್ತಿದೆ. ನಾನು ಕಾಶಿಯಲ್ಲಿದ್ದೇನೋ ಕಾಬಾದಲ್ಲೋ ತಿಳಿಯುತ್ತಿಲ್ಲ. ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂಬ ನಿಯಮ ಕೇವಲ ದೇವಸ್ಥಾನಗಳಲ್ಲಿ ಪಾಲನೆಯಾಗುತ್ತಿದ್ದು, ಮಸೀದಿಗಳು ಅದನ್ನು ಪಾಲಿಸುತ್ತಲೇ ಇಲ್ಲ. ಹೀಗಾಗಿ ನಾವು ಆಜಾನ್ ಸಮಯಕ್ಕೆ ಸರಿಯಾಗಿ ಹನುಮಾನ್ ಚಾಲೀಸಾ ಪಠಿಸುವ ನಿರ್ಧಾರ ಕೈಗೊಂಡಿದ್ದೇವೆ” ಎನ್ನುವ ಸುಧೀರ್ ಸಿಂಗ್ ತಾವು ಬಿಜೆಪಿ ಸದಸ್ಯ ಎದು ಹೇಳುತ್ತಾರಾದರೂ ಉತ್ತರ ಪ್ರದೇಶದ ಬಿಜೆಪಿ ಇದನ್ನು ದೃಢೀಕರಿಸಿಲ್ಲ.