ಹೊಸದಿಗಂತ ವರದಿ, ಮಂಡ್ಯ :
ಮಾ. 12ರಂದು ಮಂಡ್ಯ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿ ಮಂಡ್ಯದ ಪ್ರವಾಸಿ ಮಂದಿರದಿಂದ ರೈಲು ನಿಲ್ದಾಣದವರೆಗೆ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಹೆದ್ದಾರಿಯಲ್ಲಿ ಕಾಲ್ನಡಿಗೆ ಮೂಲಕ ಪರಿಶೀಲನೆ ನಡೆಸಿದರು.
ಸ್ವಚ್ಚತೆ ಸೇರಿದಂತೆ ಎಲ್ಲಾ ರೀತಿಯ ಸಿದ್ಧತಾ ಕಾರ್ಯಗಳು ನಾಳೆಯಿಂದಲೇ ಪ್ರಾರಂಭವಾಗಬೇಕು, ರಸ್ತೆ ಇಕ್ಕಲಗಳಲ್ಲಿ ಬ್ಯಾರಿಕೇಟ್ಗಳನ್ನು ಅಳವಡಿಸಬೇಕು. ಪ್ರಧಾನಿ ನರೇಂದ್ರಮೋದಿಯವರ ರೋಡ್ಶೋ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಆತಂಕಗಳು ಎದುರಾಗದಂತೆ ಎಲ್ಲ ರೀತಿಯ ಸಿದ್ಧತೆಗಳನ್ನೂ ನಡೆಸುವಂತೆ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸಿ ಮಂದಿರದಿಂದ ರೋಡ್ಶೋ ಪ್ರಾರಂಭವಾಗಿ, ಜೆ.ಸಿ. ವೃತ್ತ ಮಾರ್ಗವಾಗಿ ನಂದಾ ಸರ್ಕಲ್ನಲ್ಲಿ ರೋಡ್ಶೋ ಮುಕ್ತಾಯವಾಗಲಿದೆ. ಸುಮಾರು 1.5 ಕಿ.ಮೀ. ರೋಡ್ ಶೋ ನಡೆಯಲಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು, ತಹಸೀಲ್ದಾರ್ ವಿಜಯಕುಮಾರ್, ನಗರಸಭಾ ಆಯುಕ್ತ ಮಂಜುನಾಥ್, ಪರಿಸರ ವಿಭಾಗದ ಅಭಿಯಂತರ ರುದ್ರೇಗೌಡ, ಅಭಿಯಂತರ ರವಿಕುಮಾರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನರೇಶ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.