ಆಕೆ ಸ್ವಾತಂತ್ರ್ಯಕ್ಕಾಗಿ ಐಷಾರಾಮಿ ಬದುಕು- ವಡವೆ ವಸ್ತ್ರ ದಿಕ್ಕರಿಸಿ ಬಂದಳು; ʼಉನ್ನತ ವ್ಯಕ್ತಿತ್ವದ ಸ್ತ್ರೀʼ ಎಂದಿದ್ದರು ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರೋತ್ಸವ ಅಮೃತಮಹೋತ್ಸವದ ವಿಶೇಷ)
ಮಾಗಂಟಿ ಅನ್ನಪೂರ್ಣ ದೇವಿ (1900-1927) ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಟಪರ್ರು ಏಲೂರು ತಾಲೂಕಿನವರು.
ತಮ್ಮ ಆರಂಭಿಕ ಶಿಕ್ಷಣವನ್ನು ಗುಂಟೂರಿನ ಮಿಸನ್ ಶಾಲೆಯಲ್ಲಿ ಮತ್ತು ಕಲ್ಕತ್ತಾದ ಬ್ರಹ್ಮೋ ಗರ್ಲ್ಸ್ ಶಾಲೆಯಲ್ಲಿ ಪಡೆದರು. ಅತ್ಯುತ್ತಮ ಲೇಖಕಿ- ಅನುವಾದಕಿಯಾಗಿದ್ದ ಆಕೆ 1917 ರಲ್ಲಿ ಸೀತಾರಾಮಮ್ ಎಂಬ ಗದ್ಯದ ಸಂಪುಟವನ್ನು ರಚಿಸಿದರು, ಇದನ್ನು ಪ್ರೌಢಶಾಲಾ ತರಗತಿಗಳಲ್ಲಿ ಪಠ್ಯಪುಸ್ತಕವಾಗಿ ಬಳಸಲಾಯಿತು. ವಿವಾಹ ಮಂಗಳಂ, ನವವರ್ಷ ಸ್ವಪ್ನಂ, ಅರವಿಂದರ ಪತ್ರಗಳು ಮತ್ತು ಲೀಲಾಮೃತಂ (3 ಭಾಗಗಳು) ಸೇರಿದಂತೆ ಹಲವಾರು ಕೃತಿಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ. ನಾರಿ ಎಂಬ ಸ್ವತಂತ್ರ ಕಾದಂಬರಿಯನ್ನು ಸಹ ಬರೆದಿದ್ದಾರೆ. 1920ರಲ್ಲಿ ಮಾಗಂಟಿ ಬಾಪಿನೀಡು ಅವರನ್ನು ವಿವಾಹವಾದರು.1920ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾಕ್ಕೆ ತೆರಳಲು ಹೊರಟು ನಿಂತ ವೇಳೆಯಲ್ಲಿಯೇ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಕರೆ ಆಕೆಯನ್ನು ಸೆಳೆದು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಯೋಚನೆಯನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಮಗ್ನರಾದರು.
ಆ ಬಳಿಕ ಅನ್ನಪೂರ್ಣ ದೇವಿಯ ಜೀವನ ಮತ್ತೊಂದು ತಿರುವು ಪಡೆಯಿತು. ಆಕೆ ಪಾಶ್ಚಾತ್ಯರನ್ನು ಅದ್ಯಾವ ಪರಿ ದ್ವೇಷಿಸಲಾರಂಭಿಸಿದಳೆಂದರೆ, ಅಮೆರಿಕದ ಪ್ರಯಾಣಕ್ಕಾಗಿ ಖರೀದಿಸಿದ್ದ 1200 ರೂಪಾಯಿ ಬೆಲೆಬಾಳುವ ಸೀರೆಗಳಿಗೆ ಬೆಂಕಿ ಹಚ್ಚಿದಳು. 1921 ಅವರ ಜೀವನದಲ್ಲಿ ಮಹತ್ವದ ವರ್ಷವಾಗಿತ್ತು. ʼತಿಲಕ್ ಸ್ವರಾಜ್ಯ ನಿಧಿʼಯನ್ನು ಸಂಗ್ರಹಿಸಲು ಗಾಂಧಿಯವರು ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದರು.
ಗಾಂಧೀಜಿಯವರು ಏಲೂರಿಗೆ ಭೇಟಿ ನೀಡಿದಾಗ ತಿಲಕ ಸ್ವರಾಜ್ಯ ನಿಧಿಗೆ ಹಲವಾರು ಜನರು ಸ್ವಯಂಪ್ರೇರಿತರಾಗಿ ದಾನ ನೀಡಿದರು ಮತ್ತು ಮಹಿಳೆಯರು ತಮ್ಮ ಆಭರಣಗಳನ್ನು ನೀಡಲು ಮುಂದೆ ಬಂದರು. ಐಷಾರಾಮಿ ಆಭರಣಗಳು, ಬಳೆಗಳು ಮತ್ತು ದೊಡ್ಡವಾದ ಚಿನ್ನದ ಸರಗಳನ್ನು ತ್ಯಾಗ ಮಾಡಿದ ಮತ್ತು ಚಳುವಳಿ ಪರವಾಗಿ ವಿದೇಶಿ ಉಡುಪುಗಳನ್ನು ತ್ಯಜಿಸಿದ ಮೊದಲ ಮಹಿಳೆಯರಲ್ಲಿ ಮಾಗಂಟಿ ಅನ್ನಪೂರ್ಣ ದೇವಿ ಒಬ್ಬರು.
ಈ ಸಂಧರ್ಭದಲ್ಲಿ ಗಾಂಧೀಜಿಯವರು, ಈ ಉನ್ನತ ತ್ಯಾಗಕ್ಕೆ ನಿಮ್ಮ ಪೋಷಕರಿಂದ ಅನುಮತಿ ಪಡೆದಿದ್ದೀರಾ ಎಂದು ಕೇಳಿದಾಗ,  ‘ನನ್ನ ಪೋಷಕರು ನನ್ನ ಜೀವನದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಾನು ಅತ್ಯುಮವಾದುದನ್ನು ಮಾಡಲು ಅವರು ಪ್ರೋತ್ಸಾಹಿಸುತ್ತಾರೆ ಎಂದು ಉತ್ತರಿಸಿದ್ದಳು.’ ಈ ಬಗ್ಗೆ ಗಾಧೀಜಿಯವರು ಹೀಗೆ ಬರೆದುಕೊಂಡಿದ್ದಾರೆ “ನನಗೆ ನೆನಪಿರುವಂತೆ, ಅವಳು ತನ್ನ ಎಲ್ಲಾ ಆಭರಣಗಳನ್ನು ನನಗೆ ನೀಡಿದ ಮೊದಲ ಮಹಿಳೆ.” ಅವರಂತಹ ಉನ್ನತ-ಮನಸ್ಸಿನ ಸ್ತ್ರೀ ಹಾಗೂ ಹೃದಯ ವೈಶಾಲ್ಯವುಳ್ಳ ಪೋಷಕರು ಇಬ್ಬರೂ ಮಹೋನ್ನತ ವ್ಯಕ್ತಿತ್ವ ಹೊಂದಿದವರು ಎಂದು ಉಲ್ಲೇಖಿಸಿದ್ದಾರೆ.
1927 ರ ಮಾರ್ಚ್‌ ನಲ್ಲಿ ಪುತ್ರಿ ಝಾನ್ಸಿರಾಣಿ ಲಕ್ಷ್ಮಿ ಬಾಯಿಗೆ ಜನ್ಮ ನೀಡಿದ ಕೆಲ ದಿನಗಳಲ್ಲಿ ಆಕೆಯ ಆರೋಗ್ಯವು ಹದಗೆಡತೊಡಗಿತ್ತು. ಅಂತಿಮವಾಗಿ 927 ರ9 ಮಾರ್ಚ್ ನಲ್ಲಿ ತನ್ನ ಕೇವಲ 27 ನೇ ವಯಸ್ಸಿನಲ್ಲಿ ಅನ್ನಪೂರ್ಣ ದೇವಿ ಸ್ವರ್ಗಸ್ತರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!