ಹೊಸದಿಗಂತ ಡಿಜಿಟಲ್ ಡೆಸ್ಕ್
ಮಂಗಳೂರು ನಗರದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ‘ಮಂಗಳೂರು ದಸರಾ ಶೋಭಾಯಾತ್ರೆ’ಯ ಶ್ರೀ ಕ್ಷೇತ್ರದಿಂದ ಹೊರಟು ಮಂಗಳೂರಿನ ರಾಜಬೀದಿಗಳಲ್ಲಿ ಸಾಗುತ್ತಿದೆ.
ಶೋಭಾಯಾತ್ರೆಯ ದಾರಿಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟ ನಗರದ ಹೊಸ ಲೋಕವೊಂದನ್ನು ಸೃಷ್ಠಿಸಿತ್ತು. ಮೆರವಣಿಗೆಯುದ್ದಕ್ಕೂ ಅಸಂಖ್ಯಾತ ಭಕ್ತರು, ಪ್ರೇಕ್ಷಕರು ಹೆಜ್ಜೆ ಹಾಕುತ್ತಿದ್ದಾರೆ . ಶೋಭಾಯಾತ್ರೆಯ ರಾಜಮಾರ್ಗದ ಇಕ್ಕೆಲಗಳಲ್ಲಿ ಮತ್ತು ಕಟ್ಟಡಗಳಲ್ಲಿ ಸೇರಿದ್ದ ಜನಸ್ತೋಮ ಶಾರದೆ ಮತ್ತು ನವದುರ್ಗೆಯರ ವೈಭವದ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಶ್ರೀ ಕ್ಷೇತ್ರದಿಂದ ಹೊರಟ ವೈಭವದ ಮೆರವಣಿಗೆ ಕಂಬಳ ರಸ್ತೆ, ಮಣ್ಣಗುಡ್ಡೆ, ಲೇಡಿಹಿಲ್ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಲಾಲ್ಭಾಗ್, ಬಳ್ಳಾಲ್ಭಾಗ್, ಪಿವಿಎಸ್ ವೃತ್ತ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ, ಕಾರ್ನಾಡು ಸದಾಶಿವ ರಾವ್ ರಸ್ತೆ, ಹಂಪನ ಕಟ್ಟೆ, ವಿಶ್ವವಿದ್ಯಾನಿಲಯ ಕಾಲೇಜು, ಗಣಪತಿ ಹೈಸ್ಕೂಲ್ ರಸ್ತೆ, ರಥಬೀದಿ, ನ್ಯೂಚಿತ್ರ, ಅಳಕೆ ದಾರಿಯಾಗಿ ಸಾಗಿ ಕುದ್ರೋಳಿ ಕ್ಷೇತ್ರದತ್ತ ಸಾಗಲಿದ್ದು , ಪೂಜೆ ಬಲಿ, ಮಂಟಪ ಪೂಜೆಯ ಬಳಿಕ ಶಾರದೆ ಸಹಿತ ನವದುರ್ಗೆಯರನ್ನು ಕ್ಷೇತ್ರದ ಕಲ್ಯಾಣಿಯಲ್ಲಿ ನಾಳೆ ಬೆಳ್ಳಂಬೆಳಗ್ಗೆ ವಿಸರ್ಜಿಸಲಾಗುತ್ತದೆ.