ಮಹಾರಾಜ ಟ್ರೋಫಿ ಕ್ರಿಕೆಟ್‌ ಟೂರ್ನಿ: ಮಂಗಳೂರು ಯುನೈಟೆಡ್‌ಗೆ ಮತ್ತೊಮ್ಮೆ ಜಯ

ಹೊಸದಿಗಂತ ವರದಿ ಮೈಸೂರು:

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿಯ ಪಂದ್ಯದಲ್ಲಿ ಮಂಗಳೂರು ತಂಡ ಜಯದ ನಗೆ ಬೀರಿದೆ. ಮೈಸೂರು ವಾರಿಯರ್ಸ್‌ ಮತ್ತು ಮಂಗಳೂರು ಯುನೈಟೆಡ್‌ ನಡುವಿನ ಮಹಾರಾಜ ಟ್ರೋಫಿಯ ಪಂದ್ಯವನ್ನು ವಿಜೆಡಿ ನಿಯಮಕ್ಕೆ ಅಳವಡಿಸಲಾಯಿತು. ಮಳೆಯ ಕಾರಣದಿಂದಾಗಿ ವಿಜೆಡಿ ನಿಯಮದಂತೆ ಮಂಗಳೂರು ಯುನೈಟೆಡ್‌ ತಂಡ 8 ರನ್‌ನಿಂದ ಜಯ ಗಳಿಸಿದೆ.

ಮಳೆಯಿಂದಾಗಿ ಮೈಸೂರು ವಾರಿಯರ್ಸ್‌ ಇನ್ನಿಂಗ್ಸ್‌ 16.3 ಓವರ್‌ಗಳಿಗೆ ಸೀಮಿತಗೊಂಡಿತ್ತು. ಕರುಣ್‌ ನಾಯರ್‌ ಪಡೆ 5 ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿಸಿತ್ತು. ಮಳೆ ನಿಂತ ಬಳಿಕ ವಿಜೆಡಿ ನಿಯಮಾನುಸಾರ ಮಂಗಳೂರು ಯುನೈಟೆಡ್‌ಗೆ 14 ಓವರ್‌ಗಳಲ್ಲಿ 114 ರನ್‌ ಗುರಿ ನೀಡಲಾಯಿತು. ಮಂಗಳೂರು ಯುನೈಟೆಡ್‌ 7.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 63 ರನ್‌ ಗಳಿಸಿತ್ತು. ಮತ್ತೆ ಮಳೆ ಸುರಿದ ಕಾರಣ ಪಂದ್ಯವನ್ನು ವಿಜೆಡಿ ನಿಯಮಕ್ಕೆ ಅಳವಡಿಲಸಲಾಗಿ ಮಂಗಳೂರು ಯುನೈಟೆಡ್‌ 8 ರನ್‌ ಅಂತರದಲ್ಲಿ ಜಯ ಗಳಿಸಿತು. ಇದು ಮಂಗಳೂರಿಗೆ ಎರಡನೇ ಜಯ. ಮಂಗಳೂರು ಯುನೈಟೆಡ್‌ ಪರ ನಾಯಕ ಸಮರ್ಥ ಆರ್‌. (31) ಮತ್ತು ಅಭಿನವ್‌ ಮನೋಹರ್‌ (14) ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿದ್ದರು.

ಮಿಂಚಿದ ನಿಹಾಲ್‌ ಉಳ್ಳಾಲ್‌:

ಟಾಸ್‌ ಗೆದ್ದ ಮಂಗಳೂರು ಯುನೈಟೆಡ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ನಾಯಕ ಕರುಣ್‌ ನಾಯರ್‌ ಕೇವಲ 5 ರನ್‌ ಗಳಿಸಿ ಪೆವಿಲಿಯನ್‌ಗೆ ಸಾಗಿದ್ದು ಮೈಸೂರು ವಾರಿಯರ್ಸ್‌ಗೆ ದೊಡ್ಡ ಆಘಾತವನ್ನೇ ಉಂಟು ಮಾಡಿತು. ಅನುಭವಿ ಬೌಲರ್‌ ಎಚ್‌.ಎಸ್‌. ಶರತ್‌ ಎಸೆತದಲ್ಲಿ ಅಮಿತ್‌ ವರ್ಮಾಗೆ ಕ್ಯಾಚಿತ್ತಾಗ ಮೈಸೂರು ವಾರಿಯರ್ಸ್‌ ಪಾಳಯದಲ್ಲಿ ಮೌನ ಆವರಿಸಿತ್ತು. ಅದೇ ರೀತಿಯಲ್ಲಿ ರೋಹಿತ್‌ ಕುಮಾರ್‌ ಎಸೆತದಲ್ಲಿ ನಾಗ ಭರತ್‌ ಕೇವಲ 9 ರನ್‌ ಗಳಿಸಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿದ ನಿಹಾಲ್‌ ಉಳ್ಳಾಲ್‌, 44 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಕೇವಲ 28 ಎಸೆತಗಳನ್ನು ಎದುರಿಸಿದ ನಿಹಾಲ್‌, 4 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಆದರೆ ಮೆಕ್‌ನೈಲ್‌ ನೊರೊನ್ಹಾ ಎಸೆತದಲ್ಲಿ ಅಭಿನವ್‌ ಮನೋಹರ್‌ಗೆ ಕ್ಯಾಚಿತ್ತಾಗ ತಂಡದ ಮೊತ್ತ 74. ಮೊದಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಜಯದ ರೂವಾರಿ ಎನಿಸಿದ್ದ ಶ್ರೇಯಸ್‌ ಗೋಪಾಲ್‌ ಅವರ ಆಟ ಮಂಗಳೂರು ಯುನೈಟೆಡ್‌ ಮುಂದೆ ನಡೆಯಲಿಲ್ಲ. ಅವರು ಕೂಡ 5 ರನ್‌ ಗಳಿಸಿ ರೋಹಿತ್‌ ಕುಮಾರ್‌ ಎಸೆತದಲ್ಲಿ ಅಭಿನವ್‌ ಮನೋಹರ್‌ಗೆ ಕ್ಯಾಚಿತ್ತಾಗ ಮೈಸೂರು ವಾರಿಯರ್ಸ್‌ನ ಬೃಹತ್‌ ಮೊತ್ತದ ಕನಸು ದೂರವಾಗಿತ್ತು.

ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾದ ಕಾರಣ ಮೈಸೂರಿನ ಇನ್ನಿಂಗ್ಸ್‌ 16.3 ಓವರ್‌ಗೆ ಕೊನೆಗೊಂಡಿತು. ಮೈಸೂರು ವಾರಿಯರ್ಸ್‌ 5 ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿಸಿತ್ತು. ವಿಜೆಡಿ ನಿಯಮಾನುಸಾರ ಮಂಗಳೂರು ಯುನೈಟೆಡ್‌ಗೆ 14 ಓವರ್‌ಗಳಲ್ಲಿ 114 ರನ್‌ಗಳ ಗುರಿ ನೀಡಲಾಯಿತು.

ಸಂಕ್ಷಿಪ್ತ ಸ್ಕೋರ್‌:

ಮೈಸೂರು ವಾರಿಯರ್ಸ್‌: 16.3 ಓವರ್‌ಗಳಲ್ಲಿ 5 ವಿಕೆಟ್‌ಗೆ 112 ರನ್‌. (ನಿಹಾಲ್‌ ಉಳ್ಳಾಲ್‌ 44, ಪವನ್‌ ದೇಶಪಾಂಡೆ 14, ಶಿವರಾಜ್‌ 19, ಶುಭಾಂಗ್‌ ಹೆಗ್ಡೆ 10 ಶರತ್‌ 12ಕ್ಕೆ 1. ರೋಹಿತ್‌ ಕುಮಾರ್‌ 32ಕ್ಕೆ 2.
ಮಂಗಳೂರು ಯುನೈಟೆಡ್‌: 7.5 ಓವರ್‌ಗಳಲ್ಲಿ 2 ವಿಕೆಟ್‌ಗೆ 62ರನ್‌ . (ಸಮರ್ಥ್‌ ಆರ್‌. 31, ಅಭಿನವ್‌ ಮನೋಹರ್‌ 14, ಶುಭಾಂಗ್‌ ಹೆಗ್ಡೆ 12ಕ್ಕೆ 1.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!