ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಬಂಡಾಯ ಶಾಸಕ ಏಕನಾಥ ಶಿಂಧೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದೇ ಇರುವಷ್ಟು ಸಂಖ್ಯಾಬಲ ತಮ್ಮ ಬಳಿ ಇದೆ ಎಂದು ಹೇಳುತ್ತಿದ್ದರೆ ಕೆಲ ಮೂಲಗಳ ಪ್ರಕಾರ ಬಂಡಾಯ ಶಾಸಕರರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಇಂದಿನ ಬೆಳವಣಿಗೆಗಳ ಅಪ್ಡೇಟ್ ಇಲ್ಲಿದೆ.
- ಪಕ್ಷದ ಆಂತರಿಕ ಸಭೆ ನಡೆಸಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು 12 ಶಾಸಕರನ್ನು ಅಮಾನತ್ತು ಮಾಡಲು ಉಪಸಭಾಪತಿಗಳಿಗೆ ಮನವಿ ಸಲ್ಲಿಸಿದೆ. ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿರುವುದರಿಂದ ಏಕನಾಥ ಶಿಂಧೆ ಹಾಗೂ ಇತರ 12 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಉಪಸಭಾಪತಿಗಳಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.
- ಬಿಜೆಪಿಯು ಶಿಂಧೆ ಮತ್ತು ಠಾಕ್ರೆ ನಡುವಿನ ಈ ರಾಜಕೀಯ ಹೋರಾಟದ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದೆ ಎನ್ನಲಾಗಿದ್ದು ಶಿಂಧೆ ನೇತೃತ್ವದ ಬಂಡಾಯ ಶಾಸಕರ ಗುಂಪು ಶಿವಸೇನೆಯ ಚುನಾವಣಾ ಚಿಹ್ನೆಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
- ಅಘಾಡಿಸರ್ಕಾರವನ್ನು ಉಳಿಸಲು ಯತ್ನಿಸಿದರೆ ಶರದ್ ಪವಾರ್ ಮನೆಗೆ ಹೋಗುವುದಿಲ್ಲ ಎಂದು ಕೇಂದ್ರ ಬಿಜೆಪಿ ಸಚಿವರೊಬ್ಬರು ಕರೆ ಮಾಡಿದ್ದಾರೆ. ಶರದ್ ಪವಾರ್ ಅವರಿಗೆ ಇಂಥಹ ಭಾಷೆ ಬಳಸುವುದು ಸರಿಯಲ್ಲ ಎಂದು ಶಿವಸೇನೆಯ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
- ಬಂಡಾಯ ಶಾಸಕರಲ್ಲಿ ಕೆಲವರು ಶಿವಸೇನೆಯ ಕೌನ್ಸಿಲರ್ ಗಳ ಸಂಪರ್ಕದಲ್ಲಿದ್ದಾರೆಂದು ಶಿವಸೇನೆ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ತಮ್ಮ ಪಕ್ಷದ ಎಲ್ಲಾ ಕೌನ್ಸಿಲರ್ ಗಳ ಸಭೆಯನ್ನು ಉದ್ಧವ್ ಠಾಕ್ರೆ ಕರೆದಿದ್ಧಾರೆ.
- ಈ ರಾಜಕೀಯ ಬಿಕ್ಕಟ್ಟಿನಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ಬಿಜೆಪಿಯ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಪ್ರತಿಪಾದಿಸಿದ್ದಾರೆ.
- ನಾವು ಸದನದಲ್ಲಿ ಮತ್ತೆ ಗೆಲವು ಸಾಧಿಸುತ್ತೇವೆ. ಅವರು (ಶಾಸಕರು) ಬಹಳ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಅವರಿಗೂ ಮುಂಬೈಗೆ ಮರಳಲು ಅವಕಾಶ ನೀಡಿದ್ದೇವೆ. ಈಗ ಮುಂಬೈಗೆ ಬರುವಂತೆ ಸವಾಲು ಹಾಕುತ್ತೇವೆ ಎಂದು ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ. ಅತ್ತ ಗುವಾಹಟಿಯಲ್ಲಿರುವ ಬಂಡಾಯ ಶಾಸಕರಿಗೆ ಅಸ್ಸಾಂ ತೊರೆಯುವಂತೆ ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಪತ್ರ ಬರೆದಿದ್ದಾರೆ.
- ಈ ಎಲ್ಲ ಬೆಳವಣಿಗೆಗಳ ಮಧ್ಯದಲ್ಲಿ ಬಂಡಾಯದ ನಾಯಕ ಏಕನಾಥ್ ಶಿಂಧೆ ತಮ್ಮ ಪ್ರಾಬಲ್ಯ ಸ್ಥಾಪಿಸಲು ಗುವಾಹಟಿಯಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.
- ಪ್ರಸ್ತುತ ಶಿವಸೇನೆ ಭವನದಲ್ಲಿ ಆದಿತ್ಯ ಠಾಕ್ರೆ ಎಲ್ಲಾ ಜಿಲ್ಲಾ ಪ್ರಮುಖರ ಸಭೆ ನಡೆಸುತ್ತಿದ್ದಾರೆ. ಸೇನಾ ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಡಿ ಎಂದು ಸ್ವತಂತ್ರ ಶಾಸಕರು ಸ್ಪೀಕರ್ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.