ಹೊಸದಿಗಂತ ವರದಿ,ಬಳ್ಳಾರಿ:
ತುಂಗಭದ್ರ ನೀರಾವರಿ ಸಲಹಾ ಸಮೀತಿ ಸಭೆಯಲ್ಲಿ ತೆಗದುಕೊಂಡ ತೀರ್ಮಾನದಂತೆ ಎಚ್ ಎಲ್ ಸಿ ಕಾಲುವೆ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ತುಂಗಭದ್ರ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ತುಂಗಭದ್ರ ಜಲಾಶಯದ ಬಲದಂಡೆ ಮೆಲ್ಪಟ್ಟ ಕಾಲುವೆ ವ್ಯಾಪ್ತಿಯಲ್ಲಿ ಅತಿವೃಷ್ಟಿ ಮಳೆಯಿಂದ ಸುಮಾರು 1.99 ಲಕ್ಷ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳ ಸೇರಿದಂತೆ ಇತರೇ ಬೆಳೆಗಳು ಹಾನಿಗಿಡಾಗಿವೆ, ಇತ್ತೀಚೆಗೆ ಬೆಳೆಗಳು ಸುಧಾರಿಸುತ್ತಿದ್ದು, ವ್ಯಾಪ್ತಿಯ ರೈತರಿಗೆ ಸದ್ಯ ನೀರಿನ ಅವಶ್ಯಕತೆ ಇದೆ. 2022ರ ನ.23 ರಂದು ತುಂಗಭದ್ರಾ ನೀರಾವರಿ ಸಲಹಾ ಸಮೀತಿ ಸಭೆ ನಡೆದಿದ್ದು, ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ನೀರನ್ನು ಸ್ಥಗಿತಗೊಳಿಸಿದ್ದಾರೆ.
ಎಚ್ ಎಲ್ ಸಿ ಕಾಲುವೆಗೆ ಜ.31 ರವರೆಗೆ ನೀರು ಹರಿಸಲಾಗುವುದು ಎಂದು ತೀರ್ಮಾನಿಸಿದ್ದರೂ ಜಲಾಶಯದ ನೀರಾವರಿ ಅಧಿಕಾರಿಗಳು ರೈತರಿಗೆ ಯಾವುದೇ ಮಾಹಿತಿ ನೀಡದೇ ಜ.24ರಂದು ಕಾಲುವೆಗೆ ನೀರನ್ನು ಬಂದ್ ಮಾಡಿದ್ದಾರೆ, ಇದರಿಂದ ರೈತರು ನಾನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜ.31 ರ ವರೆಗೆ ಕಾಲುವೆಗೆ ನೀರು ಬರಲಿವೆ, ಆಂದ್ರದ ನೀರಿನೊಂದಿಗೆ ನಮಗೂ ಫೆ.5ರ ವರೆಗೆ ನೀರು ಬಿಡಲಿದ್ದಾರೆ ಎಂದು ರೈತರು ಆಶಾದಾಯಕರಾಗಿದ್ದರು. ಕೂಡಲೇ ಜಲಾಶಯದ ಮಂಡಳಿ ಅಧಿಕಾರಿಗಳಾದ ದುರ್ಗಪ್ಪ ಅವರಿಗೆ ಸೂಚನೆ ನೀಡಿ, ಎಚ್.ಎಲ್.ಸಿ. ರೈತರಿಗೆ ಆಂದ್ರದ ನೀರಿನೊಂದಿಗೆ ನಮಗೂ ಕೂಡಾ ಫೆ.5ರ ವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕುಡುತಿನಿ ಪಂಪಾಪತಿ, ಮುಷ್ಡಗಟ್ಟೆ ಭೀಮನಗೌಡ, ಉತ್ತನೂರು ಅಯ್ಯನಗೌಡ, ಕೃಷ್ಣಾನಗರ ಕ್ಯಾಂಪ್ ಶಿವಯ್ಯ, ಶ್ರೀದರಗಡ್ಡೆ ವೀರನಗೌಡ, ಸಂಗನಕಲ್ ದೊಡ್ಡಬಸಪ್ಪ, ಟಿ.ರಂಜಾನ್ ಸಾಬ್, ಗೆಣಕಿಹಾಳ್ ಶರಣಪ್ಪ, ಎತ್ತಿನಬೂದಿಹಾಳ್ ಬಸವರಾಜ್ ಸ್ವಾಮೀ ಸೇರಿದಂತೆ ಇತರರಿದ್ದರು.