ಹೊಸದಿಗಂತ ವರದಿ,ಮುಂಡಗೋಡ:
ಎಟಿಎಂನಲ್ಲಿ ಹಣ ತೆಗೆದುಕೊಡುವುದಾಗಿ ನಂಬಿಸಿ ಹಣ ಡ್ರಾ ಮಾಡಿಕೊಂಡು ವಂಚಿಸಿ ನಾಪತ್ತೆಯಾದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಕಿರಣಕುಮಾರ ಕಾಳೆಗೌಡ ಬಂಧಿತ ಆರೋಪಿಯಾಗಿದ್ದಾನೆ. ಡಿ.೨೦ರಂದು ತಾಲೂಕಿನ ಅಟ್ಟಣಗಿ ಗ್ರಾಮದ ಅಣ್ಣಪ್ಪ ಸುಭಾಂಜಿ ಎಂಬುವವರು ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ಆರೋಪಿ ಕಿರಣಕುಮಾರ ತಾನು ಹಣ ಡ್ರಾ ಮಾಡಿ ಕೊಡುವುದಾಗಿ ಅಣ್ಣಪ್ಪ ಅವರಿಗೆ ಹೇಳಿ ನಂಬಿಸಿ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ಪಡೆದು ನಂತರ ಅವರಿಗೆ ಬೇರೆ ಎಟಿಎಂ ಕಾರ್ಡ್ ನೀಡಿ ಅವರ ಖಾತೆಯಿಂದ ೨೬ಸಾವಿರ ರೂ.ಗಳನ್ನು ಡ್ರಾ ಮಾಡಿಕೊಂಡು ವಂಚಿಸಿದ್ದನು. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಜ.೭ರಂದು ದೂರು ದಾಖಲಾಗಿತ್ತು. ಸದ್ಯ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕಿರಣಕುಮಾರ ಕಾಳೆಗೌಡ ಎಟಿಎಂ ವಂಚನೆ ಕುರಿತು ಬಾಯಿ ಬಿಟ್ಟ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.