ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಪಿಯ ಕಾಕಿನಾಡ ಜಿಲ್ಲೆಯ ಪೆದ್ದಾಪುರಂನಲ್ಲಿ ‘ಅವತಾರ್-2’ ಸಿನಿಮಾ ನೋಡುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಲಕ್ಷ್ಮಿರೆಡ್ಡಿ ಶ್ರೀನು ಎಂಬ ವ್ಯಕ್ತಿ ತನ್ನ ಕಿರಿಯ ಸಹೋದರ ರಾಜು ಜೊತೆ ಅವತಾರ್-2 ಚಿತ್ರಕ್ಕೆ ಹೋಗಿದ್ದ. ಅವತಾರ್ ಸಿನಿಮಾ ನೋಡುವಾಗ ಹೃದಯಾಘಾತಕ್ಕೊಳಗಾದ ಶ್ರೀನು ಅವರನ್ನು ಆತನ ಕಿರಿಯ ಸಹೋದರ ರಾಜು ಕೂಡಲೇ ಆತನನ್ನು ಪೆದ್ದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ಆದರೆ, ಅದಾಗಲೇ ಲಕ್ಷ್ಮಿರೆಡ್ಡಿ ಶ್ರೀನು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮೃತರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.
ಸಾಮಾನ್ಯವಾಗಿ ಕೆಲವರಿಗೆ ಹಾರರ್ ಸಿನಿಮಾ ನೋಡುವಾಗ ಹೃದಯಾಘಾತವಾಗುತ್ತದೆ. ಜೇಮ್ಸ್ ಕ್ಯಾಮರೂನ್ ಮಾಡಿರುವ ‘ಅವತಾರ್-2’ ಸಿನಿಮಾದಲ್ಲಿ ಅಂಥ ಭಯಾನಕ ಘಟನೆಗಳು ಇಲ್ಲದಿದ್ದರೂ ದೃಶ್ಯಾವಳಿಗಳನ್ನು ನೋಡಿ ಕೆಲವರು ಉದ್ವೇಗಕ್ಕೊಳಗಾಗುತ್ತಾರೆ.