ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯಾನಕ ಘಟನೆ ನಡೆದಿದೆ. 30 ರೂಪಾಯಿ ವಿಚಾರವಾಗಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದೆ. ಪೋಲೀಸರ ಪ್ರಕಾರ, ಸೋನು (38) ಎಂಬ ವ್ಯಕ್ತಿ ಮದುವೆಗಳಲ್ಲಿ ಕೇಟರಿಂಗ್ ಆಗಿ ಕೆಲಸ ಮಾಡುತ್ತಿದ್ದ.
ರಾಹುಲ್ ಕೂಡ ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಸೋನು ರಾಹುಲ್ ಬಳಿ ಸ್ವಲ್ಪ ಹಣವನ್ನು ಸಾಲ ಪಡೆದಿದ್ದರು. ನಂತರ ರಾಹುಲ್ ಸೋನು ತನ್ನ ಹಣವನ್ನು ಹಿಂದಿರುಗಿಸುವಂತೆ ಕೇಳುತ್ತಾನೆ. ಆದರೆ, ಈ 30 ರೂಪಾಯಿಗೆ ಸಂಬಂಧಿಸಿದಂತೆ ರಾಹುಲ್ ಮತ್ತು ಸೋನು ನಡುವೆ ಜಗಳ ಶುರುವಾಗಿದೆ. ಈ ವಿಷಯದಲ್ಲಿ ಎರಡು ದಿನಗಳ ಹಿಂದೆ ನಡುವೆ ಹೊಡೆದಾಟವೂ ನಡೆದಿದೆ. ಈ ನಡುವೆ ಗುರುವಾರ ರಾಹುಲ್ ತನ್ನ ಸಹೋದರ ಹರೀಶ್ ಜೊತೆ ಸೇರಿ ಸೋನು ಬಳಿ ಹಣ ಕೇಳಿದ್ದಾನೆ. ಈ ಹಿನ್ನೆಲೆಯಲ್ಲಿ 30 ರೂಪಾಯಿ ವಿಚಾರದಲ್ಲಿ ಮತ್ತೆ ಜಗಳ ನಡೆದಿದೆ.
ಈ ಜಗಳದಲ್ಲಿ ರಾಹುಲ್ ಮತ್ತು ಹರೀಶ್ ಸೋನು ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇಬ್ಬರೂ ಸೋನು ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹೊಟ್ಟೆಗೆ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಸೋನು ರಸ್ತೆಯಲ್ಲಿ ಬಿದ್ದಿದ್ದರು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.