ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಾಷ್ಟ್ರೀಯ ಟೇಬಲ್ ಟೆನಿಸ್ ಕೋಚ್ ಸೌಮ್ಯದೀಪ್ ರಾಯ್ ಮ್ಯಾಚ್ ಫಿಕ್ಸಿಂಗ್ ಅಪರಾಧಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಜೊತೆಗೆ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್ಐ) ಅನ್ನು ತಪ್ಪಿತಸ್ಥರೆಂದು ನ್ಯಾಯಾಲಯವು ಹೇಳಿದ್ದು, ಅದರ ಕಾರ್ಯಕಾರಿ ಸಮಿತಿಯನ್ನು ಅಮಾನತುಗೊಳಿಸಿದೆ.
ಫೆಡರೇಶನ್ಗೆ ಒಂದು ವಾರದಲ್ಲಿ ನಿರ್ವಾಹಕರನ್ನು ನೇಮಿಸಬೇಕು ಮತ್ತು ಮಾರ್ಚ್ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿದ್ದರು ಎಂದು ನ್ಯಾಯಾಲಯ ಹೇಳಿದೆ.
ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆ ಮನಿಕಾ ಬಾತ್ರಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇಖಾ ಪಾಲಿ ಅವರು, ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಪರಿಶೀಲಿಸಲು ತ್ರಿಸದಸ್ಯ ಸಮಿತಿಯನ್ನು ರಚನೆ ಮಾಡಲಾಗಿತ್ತು. ಇದಾದ ಬಳಿಕ ದೆಹಲಿ ಕೋರ್ಟ್ ಪ್ರಕರಣದ ತನಿಖೆಯನ್ನು ಆರಂಭಿಸಿತ್ತು. ಕೋಚ್ ವಿರುದ್ಧ ಮಾಡಿದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ಸತ್ಯ ಎಂದು ಸಾಬೀತಾಗಿದೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ರಾಷ್ಟ್ರೀಯ ಕೋಚ್ನ ಸಹಾಯವನ್ನು ಪಡೆಯಲು ಮನಿಕಾ ಬಾತ್ರಾ ನಿರಾಕರಿಸಿದ್ದರು. ನಂತರ ಫೆಡರೇಶನ್ ಮಣಿಕಾಗೆ ಶೋಕಾಸ್ ನೋಟಿಸ್ ನೀಡಿತು. ಇದಕ್ಕೆ ಪ್ರತಿಕ್ರಿಯಿಸಿದ ಮಣಿಕಾ, ರಾಷ್ಟ್ರೀಯ ಕೋಚ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ನನ್ನ ಬಳಿ ಕೇಳಿಕೊಂಡಿದ್ದರು. ಆದ್ದರಿಂದ ಅವರು ತನ್ನೊಂದಿಗೆ ಕೋಚ್ ಆಗಿ ಕುಳಿತಿದ್ದರೆ, ಪಂದ್ಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಮನಿಕಾ ಹೇಳಿಕೊಂಡಿದ್ದರು.
ಮಾರ್ಚ್ 2021 ರಲ್ಲಿ ದೋಹಾದಲ್ಲಿ ನಡೆದ ಅರ್ಹತಾ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ತರಬೇತುದಾರರು ತಾನು ಕೋಚಿಂಗ್ ಮಾಡುತ್ತಿರುವ ಆಟಗಾರ್ತಿಯ ವಿರುದ್ಧದ ಪಂದ್ಯದಲ್ಲಿ ಸೋಲುವಂತೆ ನನಗೆ ಒತ್ತಡ ಹೇರಿದರು. ಇದರಿಂದ ಅವರು ಒಲಿಂಪಿಕ್ಸ್ಗೆ ಅರ್ಹತೆ ಪಡೆಯಬಹುದು ಎಂಬುದು ಅವರ ಕಾರಣವಾಗಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ರಾಷ್ಟ್ರೀಯ ಕೋಚ್ ನನ್ನ ಬಳಿ ಮ್ಯಾಚ್-ಫಿಕ್ಸಿಂಗ್ ಮಾಡಿಕೊಳ್ಳುವಂತೆ ಒತ್ತಾಯ ಹೇರಿದ್ದರು ಎಂದು ಮನಿಕಾ ಹೇಳಿಕೊಂಡಿದ್ದರು. ಸೌಮ್ಯದೀಪ್ ಕೋರಿಕೆಗೆ ನಾನು ಯಾವುದೇ ಭರವಸೆ ನೀಡಲಿಲ್ಲ ಮತ್ತು ತಕ್ಷಣವೇ ಟಿಟಿಎಫ್ಐಗೆ ತಿಳಿಸಿದ್ದೇನೆ. ಆದರೆ, ಅವರ ಒತ್ತಡ ಮತ್ತು ಬೆದರಿಕೆ ನನ್ನ ಆಟದ ಮೇಲೆ ಪರಿಣಾಮ ಬೀರಿತು ಎಂದು ಮನಿಕಾ ಹೇಳಿಕೊಂಡಿದ್ದಾರೆ.