ಹೊಸದಿಗಂತ ವರದಿ, ಶಿವಮೊಗ್ಗ:
ಶಾಲಾ-ಕಾಲೇಜು ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಇದುವರೆಗೆ ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರು ಇನ್ನು ಮುಂದಾದರೂ ತಮ್ಮ ನಿಲುವು ಬದಲಿಸಿ ತರಗತಿಗೆ ಹಾಜರಾಗಲಿ ಎಂದು ಸಂಸದ ಬಿ.ವೈ. ರಾಘವೇಂದ್ರ ಕಿವಿಮಾತು ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಬಗ್ಗೆ ಹೈಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ರಾಜ್ಯ ಹಾಗೂ ದೇಶದ ಜನರ ಪರವಾಗಿ ಈ ತೀರ್ಪು ಸ್ವಾಗತಾರ್ಹ. ಸಾಕಷ್ಟು ವಿಚಾರಗಳು ಹೈಕೋರ್ಟ್ನಲ್ಲಿ ಚರ್ಚೆಯಾಗಿವೆ. ರಸ್ತೆ, ಶಾಲೆಯಲ್ಲಿ ಪರ, ವಿರೋಧ ಚರ್ಚೆಗಳು ನಡೆದಿವೆ. ಇನ್ನು ಮುಂದಾದೂ ಇದಕ್ಕೆ ತೆರೆ ಬೀಳಲಿ ಎಂದರು.
ಮುಂದಿನ ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿವೆ. ವಿದ್ಯಾರ್ಥಿನಿಯರು ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಹಿಜಾಬ್ ಸಂಗತಿಯನ್ನು ಧರ್ಮದ ಚೌಕಟ್ಟಿನಲ್ಲಿ ನೋಡದೇ, ಮನೆಯಲ್ಲಿ ಅದಕ್ಕೆ ಗೌರವ ನೀಡಲಿ. ಶಿಕ್ಷಣ ಸಂಸ್ಥೆಗೆ ಬರುವಾಗ ಧಾರ್ಮಿಕ ಚೌಕಟ್ಟಿನಿಂದ ಹೊರಬಂದು ತರಗತಿಗಳಲ್ಲಿ ಪಾಲ್ಗೊಳ್ಳಲಿ ಎಂದು ತಿಳಿಸಿದರು.