ಹೊಸದಿಗಂತ ವರದಿ ಮೂಡಲಗಿ:
ಮರೆಯಾಗುತ್ತಿರುವ ಗ್ರಾಮೀಣ ರೈತರ ವಾಹನ ಮತ್ತು ಅವುಗಳ ಗಾಲಿ ಸಿದ್ದಗೊಳಿಸುವುದನ್ನು ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಶಾಲೆಯಲ್ಲಿ ಮೇಟಿ ವಿದ್ಯೆಯ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದು ವಿಶೇಷವಾಗಿತ್ತು. ಸಮೀಪದ ಘಟಪ್ರಭಾ ತೀರದ ಅವರಾದಿ ಗ್ರಾಮದ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಮ್ಮಾರರನ್ನು ಕರೆಸಿ ಚಿಕ್ಕಡಿಯ ಗಾಲಿಗೆ ಹಳಿ ಕಟ್ಟಿಸುವ ಮೂಲಕ ಹೊಸ ತಲೆಮಾರಿನ ಮೇಟಿ ವಿದ್ಯೆಯ ತಿಳಿವಳಿಕೆ ಮೂಡಿಸಿದರು.
ಒಂದು ಗಾಲಿಗೆ 12 ಕಟ್ಟಿಗೆ ತುಂಡುಗಳು ಹೇಗೆ ಆಧಾರವಾಗಿ ಹಿಡಿತ ಸಾಧಿಸುತ್ತವೆ. ಭಾರ ಹೊರುವಲ್ಲಿ ಹೇಗೆ ಸಮತೋಲನ ಕಾಯ್ದುಕೊಳ್ಳುತ್ತವೆ. ಕಟ್ಟಿಗೆ ತುಂಡುಗಳು ಒಂದಕ್ಕೊಂದು ಅನುಗುಣವಾಗಿ ಹೊಂದಿಕೊಳ್ಳಲು ಸುತ್ತಲೂ ಕಬ್ಬಿಣದ ಪಟ್ಟಿ(ಹಳಿ) ಹೇಗೆ ಅಳವಡಿಸಲಾಗುತ್ತದೆ ಎಂಬುದನ್ನು ತಿಳಿಸಿದರು.
ಒಂದು ಕಾಲದಲ್ಲಿ ಗ್ರಾಮೀಣ ಭಾಗದ ರೈತರ ತೇರು ಎಂದೇ ಹೆಸರಾಗಿದ್ದ ಕಟ್ಟಿಗೆ ಗಾಲಿ, ಕಬ್ಬಿಣ ಹಳಿಯ ಚಕ್ಕಡಿ ಬಂಡಿ ಇತ್ತೀಚೆಗೆ ಟೈರ್ ಗಾಲಿಗಳ ಆಗಮನದಿಂದ ನೇಪಥ್ಯಕ್ಕೆ ಸರಿದಿದೆ. ಟೈರ್ ಗಾಲಿಯ ನೂತನ ಬಂಡಿಗಳು ಬಂದಿದ್ದರಿಂದ ಹಳೆಯ ಚಕ್ಕಡಿಗಳು ಪ್ರಾಚೀನ ಪಳೆಯುಳಿಕೆಯಂತೆ ಅಪರೂಪವಾಗುತ್ತಿವೆ. ಇಂತಹ ಪದ್ದತಿ ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ಶ್ಲಾಘನೀಯ ಎಂದು ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.