ಹೊಸದಿಗಂತ ವರದಿ, ಮೈಸೂರು:
ಇಲ್ಲಿನ ಚಾಮರಾಜ ಕ್ಷೇತ್ರಕ್ಕೆ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿರುವ ಚಿತ್ರನಟರಾದ ಬಿಜೆಪಿ ಮುಖಂಡ ಎಸ್.ಜಯಪ್ರಕಾಶ್ (ಜೆಪಿ), ಏ.19 ರಂದು ಮುಂದಿನ ನಡೆ ಬಗ್ಗೆ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದು, ಇದಕ್ಕಾಗಿ ತಮ್ಮ ಪ್ರಮುಖ ಬೆಂಬಲಿಗರ ಸಭೆಯನ್ನು ಕರೆದಿದ್ದಾರೆ.
ಅಂದು ಬೆಳಗ್ಗೆ 10.30ಕ್ಕೆ ಹೆಬ್ಬಾಳಿನ ಕಾಮಧೇನು ಕಾನ್ವೆಂಟ್ (ಬಸವನಗುಡಿ)ನ ಆವರಣದಲ್ಲಿ ನಡೆಯಲಿರುವ ಹಿತೈಷಿಗಳು ಹಾಗೂ ಪ್ರಮುಖ ಬೆಂಬಲಿಗರ ಸಭೆಯಲ್ಲಿ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಟಿಕೆಟ್ ಸಿಗದ ಕಾರಣ ತಮ್ಮ ನೂರಾರು ಮಂದಿ ಬೆಂಬಲಿಗರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆ ಸ್ಪಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕಾಗಿ ಬೆಂಬಲಿಗರ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಆದ ತೀರ್ಮಾನವನ್ನು ಬಳಿಕ ಪ್ರಕಟಿಸಲಿದ್ದಾರೆ. ಮೈಸೂರಿನ ಚಾಮರಾಜ ಕ್ಷೇತ್ರಕ್ಕೆ ನಿಮಗೆ ಟಿಕೆಟ್ ಕೊಡಿಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಭರವಸೆ ನೀಡಿದ್ದರು. ಆದರೆ ಇದೀಗ ಟಿಕೆಟ್ ಕೈ ತಪ್ಪಿದೆ. ಹಾಗಾಗಿ ಪ್ರಮುಖ ಬೆಂಬಲಿಗರ ಸಭೆ ಕರೆದಿದ್ದೇನೆ. ಅಲ್ಲಿ ಮುಂದೇನು ಮಾಡಬೇಕೆಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಎಸ್.ಜಯಪ್ರಕಾಶ್ (ಜೆಪಿ) ತಿಳಿಸಿದರು.