ಹೊಸದಿಗಂತ ವರದಿ,ಕಲಬುರಗಿ:
ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾಗಿರುವ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಮಂಗಳವಾರ ತಮ್ಮ ಕಚೇರಿ ಆವರಣದಲ್ಲಿ ದಕ್ಷಿಣ ಕ್ಷೇತ್ರದ 35 ಜನ ವಿಶೇಷಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2019-20ನೇ ಸಾಲಿನ ಡಿ.ಎಂ.ಎಫ್. ನಿಧಿಯಡಿ ತಲಾ 1 ಲಕ್ಷ ರೂ. ವೆಚ್ಚದಲ್ಲಿ 35 ಫಲಾನುಭವಿಗಳಿಗೆ ಒಟ್ಟು 35 ಲಕ್ಷ ರೂ. ಮೊತ್ತದಲ್ಲಿ ತ್ರಿಚಕ್ರ ವಾಹನ ವಿತರಿಸಲಾಗಿದೆ. ಜೊತೆಗೆ ವಾಹನಕ್ಕೆ 5 ವರ್ಷದ ವಿಮೆ, ನೋಂದಣಿ ಮಾಡಿಸಿ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.
ಹುಟ್ಟು ಅಂಗವೈಕಲ್ಯ ಕಾರಣ ವಿಶೇಷಚೇತನರು ಓಡಾಡಲು ಕಷ್ಟಸಾಧ್ಯ. ಹೀಗಾಗಿ ಈ ವಾಹನಗಳನ್ನು ಅವರು ಬಳಸಿಕೊಂಡು ತಮ್ಮ ದೈನಂದಿನ ಕಾರ್ಯಕ್ಕೆ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದ ಅವರು ನಮ್ಮ ಸರ್ಕಾರ ವಿಶೇಷಚೇತನರ ಸಬಲೀಕರಣಕ್ಕೆ ಬದ್ದವಾಗಿದ್ದು, ಶೇ.3 ರಿಂದ 5ಕ್ಕೆ ವಿಶೇಷಚೇತನರ ಮೀಸಲಾತಿ ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ, ಮಹಾನಗರ ಪಾಲಿಕೆ ಸದಸ್ಯರಾದ ವೀರಣ್ಣಾ ಹೊನ್ನಳ್ಳಿ, ವಿಜಯಕುಮಾರ ಸೇವಲಾನಿ, ಗುರು ಪಟ್ಟಣ, ಮಲ್ಲಿಕಾರ್ಜುನ ಉದನೂರ, ಶಂಭುಲಿಂಗ ಬಳಬಟ್ಟಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಮುಖಂಡರಾದ ಪ್ರಕಾಶ ಪಾಟೀಲ ಹೀರಾಪೂರ, ಯೋಗೇಶ ಬಿರಾದಾರ, ಶ್ರೀನಿವಾಸ ದೇಸಾಯಿ, ವಿಜಯಲಕ್ಷ್ಮೀ ಗೊಬ್ಬೂರಕರ, ಶಾಸಕರ ಆಪ್ತ ಸಹಾಯಕ ಪ್ರವೀಣ ಇದ್ದರು.