ಹೊಸದಿಗಂತ ವರದಿ, ಮಡಿಕೇರಿ:
ಅನ್ವರ್ ಮಾನಿಪ್ಪಾಡಿ ವರದಿ ಜಾರಿಯಾದರೆ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವಾಗಲಿದ್ದು, ಎಲ್ಲರೂ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದರು.
ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ವತಿಯಿಂದ ಮಡಿಕೇರಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ‘ವಕ್ಫ್ ಸಮ್ಮಿಟ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತ್ತೋರ್ವ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಮುಸ್ಲಿಂ ಸಮುದಾಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಜಾಗೃತಗೊಳ್ಳಬೇಕು, ಬಾಲಕಿಯರಿಗೆ ಶಿಕ್ಷಣ ಕೊಡಿಸುವ ಮೂಲಕ ಸುಶಿಕ್ಷಿತಗೊಳಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೊಡಿಸಬೇಕೆಂದು ಕಿವಿಮಾತು ಹೇಳಿದರು.
ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ಹಕೀಂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ವಕ್ಫ್ ಸಲಹಾ ಸಮಿತಿ ಅಧಿಕಾರಿ ಮಹಮ್ಮದ್ ಇರ್ಫಾನ್, ಕೊಡಗು ಜಿಲ್ಲಾ ಸಹಾಯಕ ಖಾಝಿಗಳಾದ ಅಬ್ದುಲ್ಲಾ ಫೈಝಿ, ರಾಜ್ಯ ವಕ್ಫ್ ಮಂಡಳಿಯ ಅಪರ ಕಾರ್ಯನಿರ್ವಹಣಾಧಿಕಾರಿ ಖಾದರ್ ಶಾ, ಸಲಹಾ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ನಾಸಿರ್, ಎಂ.ಜಿ.ನಝೀರ್, ಶಾಫಿ ಸಅದಿ, ಸದಸ್ಯ ಕುಂಞಿ ಅಬ್ದುಲ್ಲಾ ಮತ್ತಿತರರು ಹಾಜರಿದ್ದರು. ಶಾದುಲಿ ಫೈಝಿ ಪ್ರಾರ್ಥನೆ ನೆರವೇರಿಸಿದರು.