ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಬೆಂಗಳೂರಿನ ʻಯೂತ್ ಫಾರ್ ಪರಿವರ್ತನ್ʼ ತಂಡದ ಕಾರ್ಯವನ್ನು ಸ್ಮರಿಸಿದರು. ಈ ಕುರಿತು ತಮ್ಮ 93ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ, ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ʻಯೂತ್ ಫಾರ್ ಪರಿವರ್ತನ್ʼ ಮಾಡುತ್ತಿರುವ ಕಾರ್ಯವೈಖರಿಗೆ ಶಹಬ್ಬಾಸ್ ಎಂದರು. ಕೇವಲ ಸ್ವಚ್ಛತೆ ಮಾತ್ರವಲ್ಲದೆ, ಇತರ ಸಮುದಾಯ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದೆ ಎಂದರು.
ಈ ತಂಡದ ಧ್ಯೇಯವಾಕ್ಯ ತುಂಬಾ ಸ್ಪಷ್ಟವಾಗಿದೆ. ‘ದೂರುವುದನ್ನು ನಿಲ್ಲಿಸಿ, ಕೆಲಸ ಮಾಡಲು ಪ್ರಾರಂಭಿಸಿ’ ಎಂಬ ಅದ್ಭುತವಾದ ಗುರಿಯನ್ನು ಇಟ್ಟುಕೊಂಡಿದ್ದಾರೆ ಎಂದರು. ಈ ತಂಡ ಇದುವರೆಗೆ ನಗರದಾದ್ಯಂತ 370ಕ್ಕೂ ಹೆಚ್ಚು ಸ್ಥಳಗಳನ್ನು ತಮ್ಮ ಕಲಾಕೃತಿಗಳಿಂದ ಸುಂದರಮಯವಾಗಿಸಿದೆ.
ಯೂತ್ ಫಾರ್ ಪರಿವರ್ತನ್ ಅಭಿಯಾನವು ಪ್ರತಿ ಸ್ಥಳದಲ್ಲಿ 100 ರಿಂದ 150 (150) ನಾಗರಿಕರನ್ನು ಸಂಪರ್ಕಿಸಿ ಸ್ವಚ್ಛತೆಯ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಪ್ರತಿ ಭಾನುವಾರ ಈ ಕಾರ್ಯಕ್ರಮ ಬೆಳಿಗ್ಗೆ ಪ್ರಾರಂಭವಾಗಿ ಮಧ್ಯಾಹ್ನದವರೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯದಲ್ಲಿ ಕೇವಲ ಕಸ ಎತ್ತುವುದಷ್ಟೇ ಅಲ್ಲ, ಗೋಡೆಗಳಿಗೆ ಬಣ್ಣ ಬಳಿಯುವ, ಕಲಾತ್ಮಕ ರೇಖಾಚಿತ್ರಗಳನ್ನು ತಯಾರಿಸುವ ಕೆಲಸವೂ ನಡೆಯುತ್ತದೆ. ಅನೇಕ ಸ್ಥಳಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ ರೇಖಾಚಿತ್ರಗಳನ್ನು ಬಿಡಿಸಿ ಮತ್ತು ಅವರ ಸ್ಫೂರ್ತಿದಾಯಕ ಮಾತುಗಳನ್ನೂ ಸಹ ಚಿತ್ರಗಳ ಕೆಳಗೆ ಕಾಣಬುದಾಗಿದೆ ಎಂಬುದನ್ನು ಪ್ರಧಾನಿ ಮೋದಿ ತಿಳಿಸಿದರು.