ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಎರಡುದಿನಗಳ ಕಾಲ ತಮ್ಮ ತವರು ರಾಜ್ಯ ಗುಜರಾತ್ ಪ್ರವಾಸದಲ್ಲಿದ್ದಾರೆ. ಪ್ರವಾಸದ ವೇಳೆ ಸಬರಮತಿ ನದಿಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಅಟಲ್ ಸೇತುವೆ ಮತ್ತು ಭುಜ್ ನಲ್ಲಿ ‘ಸ್ಮೃತಿ ವಾನ್ ಸ್ಮಾರಕ’ ಸೇರಿದಂತೆ ಗಾಂಧಿನಗರ, ಅಹಮದಾಬಾದ್ ಮತ್ತು ಭುಜ್ನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಸರ್ಕಾರಿ ಮೂಲಗಳ ಪ್ರಕಾರ ಪ್ರಧಾನಿ ಮೋದಿ ಅವರು ಖಾದಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು ಗುಜರಾತ್ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಹೊಸ ಕಚೇರಿ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಮತ್ತು ಅಹಮದಾಬಾದ್ನ ಸಬರಮತಿ ನದಿಯ ಎದುರಲ್ಲಿ ಅಟಲ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಖಾದಿ ಮತ್ತು ಅದರ ಪ್ರಾಮುಖ್ಯತೆಯನ್ನು ಗೌರವಿಸಲು ಖಾದಿ ಉತ್ಸವವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗುಜರಾತ್ನ ವಿವಿಧ ಜಿಲ್ಲೆಗಳಿಂದ 7500 ಮಹಿಳೆಯರು, ಖಾದಿ ಕುಶಲಕರ್ಮಿಗಳು ಭಾಗಿಯಾಗಲಿದ್ದಾರೆ. ಹಾಗೂ ಭುಜ್ನಲ್ಲಿ 2001 ರ ಭೂಕಂಪದ ಸಂತ್ರಸ್ತರ ನೆನಪಿಗಾಗಿ ನಿರ್ಮಿಸಲಾದ ಸ್ಮೃತಿ ವಾನ್ ಸ್ಮಾರಕವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
ಗಾಂಧಿನಗರದಲ್ಲಿ ಭಾರತದಲ್ಲಿ ಸುಜುಕಿಯ 40 ವರ್ಷಗಳ ಸ್ಮರಣಾರ್ಥವನ್ನು ಸೂಚಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.