ಹೊಸ ದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಸಂಘರ್ಷದಲ್ಲಿ ಸಿಲುಕಿದ್ದ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪಾರು ಮಾಡುವಲ್ಲಿ ಭಾರತದ ಆಪರೇಷನ್ ಗಂಗಾ ಯಶಸ್ವಿಯಾದರೂ, ಆ ಪೈಕಿ ಒಂದು ಕಹಿ ಸುದ್ದಿ ಎಂದರೆ ರಾಣೆಬೆನ್ನೂರಿನಿಂದ ಉಕ್ರೇನಿಗೆ ವ್ಯಾಸಂಗಕ್ಕೆ ತೆರಳಿದ್ದ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ರಷ್ಯ ಶೆಲ್ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದು.
ಇಂದು ಮುಂಜಾನೆ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದ ಹಲವರು ಗೌರವ ನಮನ ಸಲ್ಲಿಸಿದರು. ಕಳೆದೆರಡು ವಾರಗಳಿಂದ ಸರ್ಕಾರದ ಮಟ್ಟದಲ್ಲಿ ನವೀನ್ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವುದಕ್ಕೆ ಭಾರಿ ಪ್ರಯತ್ನ ಮಾಡಲಾಗಿತ್ತು. ಯುದ್ಧಭೂಮಿಯಿಂದ ಪಾರ್ಥಿವ ಶರೀರವನ್ನು ಗುರುತಿಸಿ ತರುವ ಪ್ರಕ್ರಿಯೆ ಸುಲಭದ್ದೇನಾಗಿರಲಿಲ್ಲ.
ಇತ್ತ, ನವೀನ್ ಗ್ಯಾನಗೌಡರ್ ಅವರ ಕುಟುಂಬವು ಕೆಲ ವಿಧಿ ವಿಧಾನಗಳನ್ನು ಪೂರೈಸಿದ ನಂತರ ದೇಹವನ್ನು ದಾವಣಗೆರೆಯ ಎಸ್ ಎಸ್ ಮೆಡಿಕಲ್ ಸೈನ್ಸ್ ಮತ್ತು ರೀಸರ್ಚ್ ಸೆಂಟರ್ ಗೆ ಕೊಡುವುದಾಗಿ ಅದಾಗಲೇ ಘೋಷಿಸಿದೆ.