ಹೊಸ ದಿಗಂತ ವರದಿ,ಉಡುಪಿ:
ನಗರದ ಸರ್ವೀಸ್ ಬಸ್ ನಿಲ್ದಾಣದ ಹತ್ತಿರ ಪೋಲಿಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಹೆಲ್ಮೆಟ್ ಧರಿಸದೇ ಬಂದ ಸ್ಕೂಟಿ ಸವಾರರು ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು, ಆತನ ವಿರುದ್ದ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರ ಠಾಣಾ ಪೋಲಿಸರು ವಾಹನ ತಪಾಸಣೆ ಮಾಡುತ್ತಿರುವಾಗ ತ್ರಿವೇಣಿ ಜಂಕ್ಷನ್ ಕಡೆಯಿಂದ ಶಿರಿಬೀಡು ಜಂಕ್ಷನ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸ್ಕೂಟಿ ಚಾಲಕನು ತಲೆಗೆ ಶಿರಸ್ತ್ರಾಣ ಧರಿಸದೇ ತಾನು ಸವಾರಿ ಮಾಡುತ್ತಿದ್ದ ಸ್ಕೂಟಿಯನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪೋಲಿಸರು ನಿಲ್ಲಿಸುವಂತೆ ಸೂಚನೆ ನೀಡಿದರೂ, ನಿಲ್ಲಿಸದೇ ತೆರಳಿದ್ದಾರೆ. ಇವರ ವಿರುದ್ದ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.