ಹೊಸದಿಗಂತ ವರದಿ ಶಿರಸಿ :
ಉ.ಕ ಜಿಲ್ಲೆಯಲ್ಲಿ 2023 -24 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಉತ್ತರ ಕನ್ನಡ ರೈತರಿಗೆ ನೀಡುವಂತೆ ಹೊರಡಿಸಿದ ಆದೇಶ ಪುನರ್ ಪರಿಸೀಲಿಸುವಂತೆ ವಿಮಾ ಕಂಪನಿ ಕೋರಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ಕೇಂದ್ರ ಸರಕಾರ ರೈತರಿಗೆ ಏಳು ದಿನಗಳ ಒಳಗೆ ಪಾವತಿಸುವಂತೆ ಸೋಮವಾರ ಮತ್ತೊಮ್ಮೆ ಆದೇಶ ಹೊರಡಿಸಿದೆ. ಇದಕ್ಕೆ ತಪ್ಪಿದಲ್ಲಿ ವಿಮಾ ಕಂಪನಿ ಮೇಲೆ ಆಡಳಿತಾತ್ಮಕ ಕ್ರಮ ಮತ್ತು ಹಣಕಾಸು ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಸಿದೆ.
ಈ ವಿಷಯದಲ್ಲಿ ವಿಮಾ ಕಂಪನಿ ಎತ್ತಿರುವ ತಕರಾರನ್ನು ತಿರಸ್ಕರಿಸಿರುವ ಕೇಂದ್ರ,ಸಂಸದ ವಿಶ್ವೇಶ್ವರ ಹೆಗಡೆ ಅವರ ಬೇಡಿಕೆಯನ್ನು ಪುರಸ್ಕರಿಸಿದೆ. 2023 -24 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆಯು ರೈತರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಮಾ ಪರಿಹಾರ ನೀಡದಿರುವ ಕುರಿತು ಕೇಂದ್ರ ಸರಕಾರಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಗ್ರಹ ಪಡಿಸಿದ್ದನ್ನು ಗಮನಿಸಿ ಕೇಂದ್ರ ಸರಕಾರ ಮಾ. 6 ಕ್ಕೆ ಕ್ಷೇಮ ಜನರಲ್ ಇನ್ಸೂರೆನ್ಸ್ ಕಂಪನಿ ಇವರಿಗೆ ಒಂದು ವಾರದಲ್ಲಿ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಆದೇಶ ನೀಡಿತ್ತು.
ಈ ಆದೇಶವನ್ನು ಪುನರ್ ಪರಿಶೀಲನೆ ಮಾಡಲು ಕ್ಷೇಮ ಇನ್ಸೂರೆನ್ಸ್ ಕಂಪನಿಯವರು ಪುನಃ ಸಲ್ಲಿಸಿದ್ದು ಇದರ ಬಗ್ಗೆ ಕೇಂದ್ರ ಸರ್ಕಾರ ಪರಾಮರ್ಶಿಸಿ ಕ್ಷೇಮ ಕಂಪನಿಯವರ ಬೇಡಿಕೆಯನ್ನು ತಿರಸ್ಕರಿಸಿದೆ.