ಹೊಸದಿಗಂತ ವರದಿ, ಗೋಕರ್ಣ:
ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಂಗಳವಾರ ಅಂಗಾರಕ ಸಂಕಷ್ಟ ಚತುರ್ಥಿಯಂದು ದಕ್ಷಿಣ ಕಾಶಿ ಖ್ಯಾತಿಯ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣಕ್ಕೆ ಭೇಟಿ ನೀಡಿ ಶ್ರೀಮಹಾಗಣಪತಿ ಮತ್ತು ಮಹಾಬಲೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಮೇಲುಸ್ತುವಾರಿ ಸಮಿತಿ ಸದಸ್ಯರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಈಶ್ವರಪ್ಪ ಧಾರ್ಮಿಕ ಸ್ಥಳಗಳಿಗೆ ಖಾಸಗಿ ಭೇಟಿ ನೀಡುತ್ತಿದ್ದು ಮಾನಸಿಕ ನೆಮ್ಮದಿ, ನಿರಾಳತೆಗಾಗಿ ಕುಟುಂಬದ ಜೊತೆಗೆ ಭೇಟಿ ನೀಡಲಾಗುತ್ತಿದೆ ಎಂದಷ್ಟೇ ಹೇಳಿದರು.
ಗೋಕರ್ಣದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿದ ಈಶ್ವರಪ್ಪ ಅಲ್ಲಿಂದ ಕೊಲ್ಲೂರಿಗೆ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ಬಿ.ಜೆ.ಪಿ ಮುಖಂಡ ಪ್ರಮೋದ ಹೆಗಡೆ, ಗೋಕರ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಜನ್ನು, ತೊರ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಕವರಿ ಮೊದಲಾದವರು ಉಪಸ್ಥಿತರಿದ್ದರು .