ಹೊಸದಿಗಂತ ವರದಿ, ಮೈಸೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಎರಡು ಶೆಡ್ಗಳನ್ನು ಶನಿವಾರ ಬೆಳಗ್ಗೆ ತೆರೆವುಗೊಳಿಸಿದ ಪ್ರಾಧಿಕಾರದ ಅಧಿಕಾರಿಗಳು, ನೂರು ಕೋಟಿ ರೂ ಮೌಲ್ಯದ 5.14 ಎಕರೆ ಜಮೀನನ್ನು ವಶಕ್ಕೆ ತೆಗೆದುಕೊಂಡಿದೆ. ಮೈಸೂರು ತಾಲ್ಲೂಕು ಕಸಬಾ ಹೋಬಳಿಯ ಬಸವನ ಹಳ್ಳಿ ಗ್ರಾಮದ ಸರ್ವೆ ನಂ 118ರ 5.14 ಎಕರೆ ಜಮೀನನ್ನು ಪ್ರಾಧಿಕಾರವು 1991ರ ಡಿಸೆಂಬರ್ 23ರಂದು ವಿಜಯ ನಗರ 4ನೇ ಹಂತ, 2ನೇ ಘಟ್ಟ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡು ಪರಿಹಾರ ಮೊತ್ತವನ್ನು ಭೂ ಮಾಲೀಕರಿಗೆ ಪಾವತಿಸಿತ್ತು.
ಸದರಿ ಸ್ವತ್ತಮಗಮಿ ಭೂಮಾಲೀಕರಿಂದ ಒಪ್ಪಂದ ಮಾಡಿಕೊಂಡ ಮಹದೇವಯ್ಯ ಎಂಬುವರು ಸಿವಿಲ್ ನ್ಯಾಯಾಲಯದಲ್ಲಿ ಅಸಲು ಹಾಕಿದ್ದರು. ವಿಚಾರಣೆ ನಡೆಸಿ ನ್ಯಾಯಾಲಯ ಸದರಿ ಜಮೀನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದೆ ಎಂದು ತೀರ್ಪು ನೀಡಿತ್ತು. ಈ ಹಿನ್ನಲೆಯಲ್ಲಿ ಇಂದು ಮುಂಜಾನೆ 6 ಗಂಟೆಯಲ್ಲಿ ಸೂಕ್ತ ಪೊಲೀಸ್ ರಕ್ಷಣೆಯೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ಕಾರ್ಯಚರಣೆ ನಡೆಸಿದ ಪ್ರಾಧಿಕಾರದ ಅಧಿಕಾರಿಗಳು ನಿರ್ಮಿಸಲಾಗಿದ್ದ 2 ಅನಧಿಕೃತ ಶೆಡ್ಗಳನ್ನು ತೆರವುಗೊಳಿಸಿ, ಜಮೀನನ್ನು ಪ್ರಾಧಿಕಾರದ ವಶಕ್ಕೆ ತೆಗೆದುಕೊಂಡು, ಅಲ್ಲಿ ಫಲಕವನ್ನು ಅಳವಡಿಸಿದರು. ಸದರಿ ಜಮೀನಿನಲ್ಲಿ
50*80 ಅಳತೆಯ 11 ನಿವೇಶನಗಳು, 40*60 ಅಳತೆಯ 36 ನಿವೇಶನಗಳು ರಚನೆಯಾಗಲಿದೆ. ಸದರಿ ಸ್ವತ್ತಿನ
ಮೌಲ್ಯ ಸುಮಾರು 100 ಕೋಟಿಗಳಾಗಿದೆ ಎಂದು ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ ನಟೇಶ್ ತಿಳಿಸಿದರು. ಕಾರ್ಯಚರಣೆ ವೇಳೆ ಪ್ರಾಧಿಕಾರದ ಅಧೀಕ್ಷಕ ಭೂ ಸ್ವಾಧೀನಾಧಿಕಾರಿ ಹರ್ಷವರ್ಧನ್, ಕಾರ್ಯಪಾಲಕ ಅಭಿಯಂತರುಗಳಾದ ಮೋಹನ್, ಸತ್ಯನಾರಾಯಣ ಜೋಷಿ, ವಲಯಾಧಿಕಾರಿಗಳಾದ ರವೀಂದ್ರಕುಮಾರ್, ಕಿರಣ್, ಶಿವಣ್ಣ, ನಾಗೇಶ್, ರವಿಶಂಕರ್. ಸಹಾಯಕ ಕಿರಿಯ ಅಭಿಯಂತರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗ ಹಾಜರಿದ್ದರು.