ಹೊಸದಿಗಂತ ವರದಿ ವಿಜಯಪುರ:
ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ. ಪಾಟೀಲ ಒಂದೇ ನಾಣ್ಯದ ಎರಡು ಮುಖಗಳಂತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ದೂರಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಇಬ್ಬರ ನಿರ್ಲಕ್ಷ್ಯದಿಂದಾಗಿ ವಿಜಯಪುರ ನಗರ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದರು.
ನಮ್ಮ ಸರ್ಕಾರ ದೆಹಲಿಯಲ್ಲಿ ಬದಲಾವಣೆ ತಂದಿದೆ. ಸದ್ಯ ಪಂಜಾಬ್ ರಾಜ್ಯದಲ್ಲಿ ಕೂಡ ಎಎಪಿ ಸರ್ಕಾರ ಬದಲಾವಣೆ ತಂದಿದ್ದು, ಅಲ್ಲಿನ ಬಡವರ್ಗದವರು ನೆಮ್ಮದಿಯ ಜೀವನ ಸಾಗಿಸುವಂತೆ ಮಾಡುತ್ತಿದ್ದೇವೆ. ಅದೇ ಮಾದರಿಯಲ್ಲಿ ನಾವು ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ ಜನಪರ ಸರ್ಕಾರವನ್ನು ತರುವ ಗುರಿಯನ್ನು ಹೊಂದಿದ್ದೇವೆ ಎಂದರು.
ವಿಜಯಪುರ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳ ದೊಂಬರಾಟದಿಂದ ಬೇಸತ್ತಿದ್ದು, ಬದಲಾವಣೆಯನ್ನು ಬಯಸಿದ್ದಾರೆ. ಈ ಬದಲಾವಣೆಗೆ ಪರ್ಯಾಯ ಶಕ್ತಿಯೆಂದರೆ ಅದು ಎಎಪಿ ಎಂದರು.