ಹೊಸದಿಗಂತ ಡಿಜಿಟಲ್ ಡೆಸ್ಕ್
ಇಲ್ಲಿನ ಡಾ. ಡಿ. ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ರೋಚಕ ಪಂದ್ಯ ದಲ್ಲಿ ಮಹೇಂದ್ರ ಸಿಂಗ್ ಧೋನಿ ಪರಾಕ್ರಮದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಮೂರು ವಿಕೆಟ್ ಗಳ ಗೆಲುವು ಸಾಧಿಸಿದೆ.
ಈ ಗೆಲವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಏಳು ಪಂದ್ಯಗಳಲ್ಲಿ ಎರಡನೇ ಗೆಲವು ಸಾಧಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿಸಿಕೊಂಡರೆ, ಮುಂಬೈ ಇಂಡಿಯನ್ಸ್ ಸತತ ಏಳನೇ ಸೋಲು ಕಾಣುವ ಮೂಲಕ ಟೂರ್ನಿಯಿಂದ ಬತುತೇಕ ಹೊರಬಿದ್ದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 155 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು. ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮ (51) ಆಕರ್ಷಕ ಅರ್ಧಶತಕ, ಸೂರ್ಯಕುಮಾರ್ ಯಾದವ್ 32, ಹೃತಿಕ್ ಶೋಕೀನ್ 25 ರನ್ ಗಳ ಕಾಣಿಕೆ ನೀಡಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚಿದ ವೇಗಿ ಮುಕೇಶ್ ಚೌಧರಿ 3, ಬ್ರಾವೊ 2, ಮಿಚೆಲ್ ಸ್ಯಾಂಟ್ನರ್ 1 ವಿಕೆಟ್ ಕಬಳಿಸಿದರು.
156 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕಿ ಗೆಲವಿನ ನಗೆ ಬೀರಿತು. ಸಿಎಸ್ ಕೆ ಪರ ಅಂಬಾಟಿ ರಾಯುಡು 40, ರಾಬಿನ್ ಉತ್ತಪ್ಪ 30 ರನ್ ಕೊಡುಗೆ ನೀಡಿದರು. ಸ್ಲಾಗ್ ಓವರ್ ಗಳಲ್ಲಿ ಕ್ರೀಸ್ ಗೆ ಬಂದ ಧೋನಿ ಅಬ್ಬರಿಸಿದರು. ಉನಾದ್ಕತ್ ಎಸೆದ ಕೊನೆಯ ಓವರ್ ಚೆನ್ನೈ ಗೆಲುವಿಗೆ ಕೊನೆಯ ನಾಲ್ಕು ಎಸೆತಗಳಲ್ಲಿ 16 ರನ್ ಬೇಕಿತ್ತು. ಈ ವೇಳೆ 6, 4, 4 ಗಳಿಸಿದ ಧೋನಿ(28) ಪ್ರೇಕ್ಷಕರನ್ನು ಸೀಟಿನಂಚಿಗೆ ತಂದರು. ಕೊನೆಯ ಎಸೆತದಲ್ಲಿ ನಾಲ್ಕು ರನ್ ಬೇಕಿತ್ತು ಆ ಎಸೆತವನ್ನೂ ಬೌಂಡರಿಗಟ್ಟಿದ ಧೋನಿ ಚೆನ್ನೈಗೆ ರೋಚಕ ಗೆಲವು ತಂದುಕೊಟ್ಟರು. ಮುಂಬೈ ಇಂಡಿಯನ್ಸ್ ಪರ ಡೇನಿಯಲ್ ಸ್ಯಾಮ್ಸ್ 4, ಜಯದೇವ್ ಉನದ್ಕತ್ 2, ರಿಲೆ ಮೆರೆಡಿತ್ 1 ವಿಕೆಟ್ ಪಡೆದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ