ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಪೊಲೀಸರಿಂದ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ವಿರುದ್ಧದ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ.
ಇದರ ಜೊತೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯ ನಿಕಟವರ್ತಿಯಾಗಿರುವ ಗಿರೀಶ ಮಹಾಜನ ಆರೋಪಿಯಾಗಿರುವ ಮತ್ತೊಂದು ಪ್ರಕರಣವನ್ನು ಸಹ ಸಿಬಿಐಗೆ ವಹಿಸಲಾಗಿದೆ ಎಂದು ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ.
ರಶ್ಮಿ ಶುಕ್ಲಾ ವಿರುದ್ಧ ಮಾರ್ಚ್ 26, 2021 ರಂದು ಮುಂಬೈ ಸೈಬರ್ ಸೆಲ್ ಎಫ್ಐಆರ್ ದಾಖಲಿಸಿತ್ತು. ರಶ್ಮಿ ಶುಕ್ಲಾ ಸಲ್ಲಿಸಿದ್ದ ರಹಸ್ಯ ವರದಿಯೊಂದನ್ನು ಸೋರಿಕೆ ಮಾಡಿದ್ದಕ್ಕಾಗಿ ಗುಪ್ತಚರ ಇಲಾಖೆಯ ಸಹಾಯಕ ಆಯುಕ್ತರು ಅಪರಿಚಿತ ವ್ಯಕ್ತಿಗಳ ವಿರುದ್ಧ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಎಫ್ಐಆರ್ ದಾಖಲಾಗಿತ್ತು.
ಅಲ್ಲದೇ ಎಫ್ಐಆರ್ ದಾಖಲಾಗುವ ಮೂರು ದಿನಗಳ ಮುಂಚೆ, ಮಹಾರಾಷ್ಟ್ರದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆಗಿನ ಪ್ರತಿಪಕ್ಷ ನಾಯಕ , ಪ್ರಸುತ್ತ ಡಿಸಿಎಂ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದರು. ಅಲ್ಲದೆ ಆಗಿನ ಮಹಾರಾಷ್ಟ್ರ ಗುಪ್ತಚರ ಇಲಾಖೆ ಕಮಿಷನರ್ ರಶ್ಮಿ ಶುಕ್ಲಾ ತಯಾರಿಸಿದ್ದ ವರದಿ ಹಾಗೂ ಇನ್ನೂ ಕೆಲ ದಾಖಲೆಗಳನ್ನು ಅವರು ಪ್ರದರ್ಶಿಸಿದ್ದರು.
ಜೊತೆಗೆ ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರದ ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದರು. ತಮ್ಮ ಬಳಿ ಇರುವ ಎಲ್ಲ ದಾಖಲೆಗಳು ಹಾಗೂ ರಶ್ಮಿ ಶುಕ್ಲಾ ವರದಿಯ ಪೆನ್ ಡ್ರೈವ್ಗಳನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸುವುದಾಗಿ ಹೇಳಿದ್ದರು.