ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾದಿ ಮೊಹಮ್ಮದ್ ಬಗ್ಗೆ ಅಸಭ್ಯ ಹೇಳಿಕೆ ಆರೋಪ ಎದುರಿಸುತ್ತಿರುವ ನೂಪುರ್ ಶರ್ಮಾ ಅವರಿಗೆ ಮಹಾರಾಷ್ಟ್ರದ ಮುಂಬ್ರಾ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಶರ್ಮಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಈ ತಿಂಗಳ 22 ರಂದು ತಮ್ಮ ಮುಂದೆ ಹಾಜರಾಗುವಂತೆ ಆದೇಶಿಸಲಾಗಿದೆ. ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ಅವರ ಹೇಳಿಕೆಗಳ ಬಳಿಕ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ. ಆದರೂ ವಿವಾದ ಮಾತ್ರ ಬಗೆಹರಿಯುತ್ತಿಲ್ಲ.
ಈ ವಿಷಯವು ನಿಧಾನವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ಹಲವು ಇಸ್ಲಾಮಿಕ್ ರಾಷ್ಟ್ರಗಳು ಭಾರತವನ್ನು ಟೀಕಿಸಿವೆ. ಇತ್ತೀಚೆಗಷ್ಟೇ ನೂಪುರ್ ಶರ್ಮಾ ಅವರಿಗೆ ಇಸ್ಲಾಮಿಕ್ ಸಂಘಟನೆಗಳಿಂದ ಬೆದರಿಕೆಗಳು ಬಂದಿದ್ದವು. ಇದರೊಂದಿಗೆ ದೆಹಲಿ ಪೊಲೀಸರು ಶರ್ಮಾಗೆ ಭದ್ರತೆ ಒದಗಿಸಿದರು. ನೂಪುರ್ ಶರ್ಮಾ ಅವರು ಕ್ಷಮೆ ಯಾಚಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಲವು ಸಂಘಟನೆಗಳು ಎಚ್ಚರಿಕೆ ನೀಡಿವೆ.