ಹೊಸದಿಗಂತ ವರದಿ, ಕಲಬುರಗಿ
ಕಾಂಗ್ರೆಸ್ ನಾಯಕ ಶಾಸಕ ಪ್ರಿಯಾಂಕ್ ಖರ್ಗೆಯನ್ನು ಕೊಲೆ ಮಾಡಿಸುವಂತಹ ಕೆಲಸಕ್ಕೆ ಬಿಜೆಪಿ ಮುಂದಾಗಿದೆ ಎಂದು ಮಾಜಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಭ್ರಷ್ಟಾಚಾರವನ್ನು ನಿರಂತರವಾಗಿ ಬಯಲಿಗೆಳೆದಿದ್ದರು. ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಸರ್ಕಾರದ ದೊಡ್ಡ ದೊಡ್ಡ ನಾಯಕರು ಭಾಗಿಯಾಗಿದ್ದರೆ ಅಂತಾ ಹೇಳಿದ್ದಾರೆ. ಈ ಹಿನ್ನಲೆ ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಪ್ರಿಯಾಂಕ್ ಖರ್ಗೆ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ದೂರಿದರು.
ಸಮ್ಮಿಶ್ರ ಸರ್ಕಾರದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಸೆಕ್ಯೂರಿಟಿ ಇತ್ತು. ಸರ್ಕಾರ ಹೋದ ಮೇಲೆ ಸೆಕ್ಯುರಿಟಿ ಹಿಂಪಡೆದರು. ನಂತರ ಅವರಿಗೆ ಮೂರು ಬಾರಿ ಕೊಲೆ ಬೆದರಿಕೆ ಬಂದಿದೆ. ಈ ಕುರಿತು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎರಡು ಎಫ್ ಐ ಆರ್ ದಾಖಲಾಗಿದೆ.
ಬಿಜೆಪಿ ಸರ್ಕಾರ ಬಿಜೆಪಿ ಮುಖಂಡರ ಮೂಲಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡುತ್ತೇವೆ ಎಂದು ಹೇಳಿಸಿದ್ದಾರೆ ಎಂದು ಶರಣ ಪ್ರಕಾಶ್ ಆರೋಪಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ