ಹೊಸದಿಗಂತ ವರದಿ,ಮಡಿಕೇರಿ:
ಲೈನ್ ಮನೆಯಲ್ಲಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸುವಲ್ಲಿ ವೀರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿ.ಬಾಡಗ ಗ್ರಾಮದ ತೋಟವೊಂದರ ಲೈನ್ ಮನೆಯಲ್ಲಿದ್ದ ವಿವಾಹಿತ ಮಹಿಳೆ ಚಿಮ್ಮಿ ಎಂಬಾಕೆಯೇ ಮೃತ ದುರ್ದೈವಿಯಾಗಿದ್ದು, ಕಾರ್ಮಿಕರಾದ ಪಂಜರಿ ಎರವರ ಸುರೇಶ್ (30) ಹಾಗೂ ಪಣಿ ಎರವರ ಸುಬ್ರಮಣಿ (28) ಬಂಧಿತ ಆರೋಪಿಗಳಾಗಿದ್ದಾರೆ.
ಮಾ.2 ರಂದು ಚಿಮ್ಮಿಯ ಮೇಲೆ ಕತ್ತಿಯಿಂದ ಹಲ್ಲೆಯಾಗಿದ್ದು, ಮಾ.7 ರಂದು ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಒಂಟಿಯಾಗಿದ್ದಾಗ ಕೃತ್ಯ: ಪಣಿ ಎರವರ ಕುಳಿಯ ಹಾಗೂ ಚಿಮ್ಮಿ ಕಾರ್ಮಿಕ ದಂಪತಿಗಳು ಲೈನ್ ಮನೆಯಲ್ಲಿ ವಾಸವಿದ್ದರು. ತೋಟದ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ ನಂತರ ಕುಳಿಯ ಮಗಳ ಮನೆಗೆಂದು ಬಿ.ಶೆಟ್ಟಿಗೇರಿ ಗ್ರಾಮಕ್ಕೆ ತೆರಳಿದ್ದರು. ಚಿಮ್ಮಿ ಮನೆಯಲ್ಲಿ ಒಂಟಿಯಾಗಿದ್ದಾಳೆ ಎಂದು ತಿಳಿದ ಪಾನಮತ್ತ ಆರೋಪಿಗಳಿಬ್ಬರು ಅಕ್ರಮ ಪ್ರವೇಶ ಮಾಡಿ ಅತ್ಯಾಚಾರ ಯತ್ನ ಮಾಡಿದರೆನ್ನಲಾಗಿದ್ದು, ತನ್ನ ಮೇಲೆ ದಾಳಿಯಾದಾಗ ತಪ್ಪಿಸಿಕೊಳ್ಳುವ ಸಲುವಾಗಿ ಚಿಮ್ಮಿ ಕಿರುಚಿಕೊಂಡಾಗ ಆತಂಕಗೊಂಡ ಆರೋಪಿಗಳು ಅಲ್ಲೇ ಇದ್ದ ಕತ್ತಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂದು ಹೇಳಲಾಗಿದೆ.
ವಿಷಯ ತಿಳಿದ ಪತಿ ಹಾಗೂ ಪುತ್ರಿ ಗಾಯಾಳು ಚಿಮ್ಮಿಯನ್ನು ವೀರಾಜಪೇಟೆ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರು.
ಬಸವನಹಳ್ಳಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿದ್ದ ಪ್ರಥಮ ಆರೋಪಿ ಸುರೇಶ್ ಮತ್ತು ವಿ.ಬಾಡಗ ಗ್ರಾಮದ ಲೈನ್ ಮನೆಯಲ್ಲಿದ್ದ ದ್ವಿತೀಯ ಆರೋಪಿ ಸುಬ್ರಮಣಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿರುವುದಾಗಿ ತಿಳಿದು ಬಂದಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎ.ಅಯ್ಯಪ್ಪ ಅವರ ಆದೇಶದ ಮೇರೆಗೆ ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನೀರಿಕ್ಷಕ ಬಿ.ಎಸ್.ಶ್ರೀಧರ್ ಅವರ ನೇತೃತ್ವದಲ್ಲಿ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಸಿದ್ಧಲಿಂಗ ಬಿ.ಬಾಣಸೆ, ಎ.ಎಸ್.ಐ. ನಾಣಿಯಪ್ಪ, ಸಿಬ್ಬಂದಿಗಳಾದ ರಾಮಪ್ಪ, ತೀರ್ಥಕುಮಾರ್, ಶ್ರೀಕಾಂತ್ ಕೆಂದು ಹಾಗೂ ರವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು