ಹೊಸದಿಗಂತ ವರದಿ ಹುಬ್ಬಳ್ಳಿ:
ಲಾರಿ ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ ಲಾರಿ ಚಾಲಕನೋರ್ವ ಟಿಪ್ಪರ ಚಾಲಕನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ ಘಟನೆ ನಗರದ ಹೊರವಲಯದ ಗಾಮನಗಟ್ಟಿಯ ವಿಮಾನ ನಿಲ್ದಾಣ ಮಾರ್ಗದ ಕಲ್ಕಿ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಟಿಪ್ಪರ್ ಚಾಲಕ ವಿಶ್ವನಾಥ ಮಾಲಿಪಾಟೀಲ (27) ಹತ್ಯೆಯಾದವರು.
ಟಿಪ್ಪರ್ ಚಾಲಕ ವಿಶ್ವನಾಥ ಲಾರಿಯೊಂದನ್ನು ಓವರ್ ಟೇಕ್ ಮಾಡಿದ್ದಾರೆ. ಇದರಿಂದ ಕೋಪಗೊಂಡು ಲಾರಿ ಚಾಲಕ ಟಿಪ್ಪರ್ ತಡೆದು ನಿಲ್ಲಿಸಿದ್ದಾನೆ.
ನಂತರ ಇಬ್ಬರ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಲಾರಿ ಚಾಲಕ ಅವರನ್ನು ಟಿಪ್ಪರ ಚಾಲಕ ಮೇಲೆ ಹಲ್ಲೆ ನಡೆಸಿದಲ್ಲದೇ ಹತ್ಯೆಮಾಡಿದ್ದಾನೆ. ಸ್ಥಳೀಯರ ಗಮನಕ್ಕೆ ಬರುತ್ತಿದ್ದಂತೆ, ಆರೋಪಿ ತಪ್ಪಿಸಿಕೊಂಡಿದ್ದಾನೆ. ಪ್ರತ್ಯಕ್ಷದರ್ಶಿಗಳು 112 ಗೆ ಕರೆ ಮಾಡಿ ತಿಳಿಸಿದ್ದಾರೆ. ಆರೋಪಿ ಪತ್ತೆಗೆ ಎಸಿಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಶೀಘ್ರ ಪತ್ತೆಹಚ್ಚಲಾಗುವುದು ಎಂದು ಡಿಸಿಪಿ ರಾಜೀವ್ ಎಂ. ತಿಳಿಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.